ADVERTISEMENT

ಪಕ್ಷ ವಿರೋಧಿ ಚಟುವಟಿಕೆ: ಉಚ್ಛಾಟನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 9:28 IST
Last Updated 10 ಅಕ್ಟೋಬರ್ 2017, 9:28 IST

ತುರುವೇಕೆರೆ: ಜಿಲ್ಲಾ ಜನತಾದಳದ ಅಧ್ಯಕ್ಷ ಸಿ.ಚನ್ನಿಗಪ್ಪ, ತುರುವೇಕೆರೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್‌ಗೌಡ ಪಕ್ಷ ವಿರೋಧ ಚಟುವಟಿಕೆ ನಡೆಸಿದ ಕಾರಣ ತಾಲ್ಲೂಕಿನ ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆಂಬ ವಿಚಾರದ ಪತ್ರ ವ್ಯಾಟ್ಸಪ್‌ಗಳಲ್ಲಿ ಬೆಳಗಿನಿಂದಲೇ ಹರಿದಾಡುತ್ತಾ ಹಲವು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಪತ್ರದಲ್ಲಿ ಏನಿದೆ: ಎಂ.ಡಿ.ರಮೇಶ್‌ಗೌಡ ಜೆಡಿಎಸ್ ಪಕ್ಷದಿಂದ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ, ಕೊನೆಗೆ ಅಧ್ಯಕ್ಷರಾಗಿಯೂ ಪಕ್ಷದಿಂದ ಎಲ್ಲ ಅನುಕೂಲಗಳನ್ನು ಪಡೆದುಕೊಂಡು ಇತ್ತೀಚಿನ ದಿನಗಳಲ್ಲಿ ತಾಲ್ಲೂಕು ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸಿ ಹಲವಾರು ಕಾರ್ಯಕ್ರಮಗಳ ಭಾಷಣಗಳಲ್ಲಿ ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪನವರ ಬಗ್ಗೆ ‘ಭ್ರಷ್ಟ ಶಾಸಕರು ಇವರಿಗೆ ಮುಂದಿನ ದಿನಗಳಲ್ಲಿ ಮತ ನೀಡ ಬೇಡಿ’ ಎನ್ನುತ್ತಾ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೋಡಗಿದ್ದೀರಿ. ಅಲ್ಲದೆ ಕಳೆದ ಎಪಿಎಂಸಿ ಚುನಾವಣೆಯಲ್ಲಿ ತಾಳಕೆರೆ ಕ್ಷೇತ್ರದ ಬಂಡಾಯ ಅಭ್ಯರ್ಥಿಗೆ ನೇರ ಸಹಕಾರ ನೀಡುವುದರೊಂದಿಗೆ ನಮ್ಮ ಜೆಡಿಎಸ್ ಪಕ್ಷದ ಸೋಲಿಗೆ ಕಾರಣರಾಗಿದ್ದೀರಿ, ಇದರಿಂದ ಪಕ್ಷದ ಸಂಘಟನೆ ಹಾಗೂ ಬೆಳವಣಿಗೆಗೆ ಹಾನಿಯಾಗಿರುವ ಪ್ರಯುಕ್ತ ನಿಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದಿದೆ.

ಎಂ.ಡಿ.ರಮೇಶ್ ಗೌಡ ಅವರ ಪತ್ನಿ ಭಾಗ್ಯರಮೇಶ್ ಗೌಡ ಜೆಡಿಎಸ್ ಪಕ್ಷದ ಹಾಲಿ ಜಿಲ್ಲಾ ಪಂಚಾಯ್ತಿ ಸದಸ್ಯರೂ ಸಹ ಆಗಿರುವುದನ್ನು ಈ ವೇಳೆ ನೆನೆಯಬಹುದು.
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್‌ಗೌಡ ನಾನು ಯಾವುದೇ ಪಕ್ಷ ವಿರೋಧ ಚಟುವಟಿಕೆಯನ್ನು ನಡೆಸಿಲ್ಲ, ಮುಂದೆ ನಡೆಸುವುದೂ ಇಲ್ಲ.

ADVERTISEMENT

ನನ್ನನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ನನಗೆ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ನಾನು ಹಲವು ವರ್ಷಗಳಿಂದ ರಾಜಕೀಯದಲಿದ್ದು, ತಾಲ್ಲೂಕಿನ ಜನರ ಸೇವೆಯ ಮಾಡುತ್ತಾ ಬಂದಿದ್ದೇನೆ. ನನಗೆ ಮತದಾರರು ಮತ್ತು ಕಾರ್ಯಕರ್ತರ ಶ್ರೀರಕ್ಷೆ ಇದೆ, ಯಾರು ಏನೂ ಮಾಡಿದರೂ ಆಗದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.