ADVERTISEMENT

ಪದವಿ ಕಾಲೇಜು: ಈ ವರ್ಷವೂ ಅನುಮಾನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 9:05 IST
Last Updated 2 ಮಾರ್ಚ್ 2011, 9:05 IST

ತುಮಕೂರು: ಕೊನೆಗೂ ವಿದ್ಯಾರ್ಥಿ ಪರ  ಸಂಘಟನೆಗಳ ಬೇಡಿಕೆಗೆ ಮನ್ನಣೆ ಸಿಕ್ಕಿದೆ. ನಗರದಲ್ಲಿ 2011-12ನೇ ಶೈಕ್ಷಣಿಕ ಸಾಲಿನಿಂದಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಸರ್ಕಾರ ಮಂಜೂರಾತಿ ನೀಡಿದೆ.ಕಾಲೇಜಿಗೆ ಬೇಕಾದ ನಿವೇಶನ ಒದಗಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿಗೆ ಕಳೆದ ಫೆಬ್ರುವರಿ 3ರಂದು ಪತ್ರ    ಬರೆದಿದ್ದಾರೆ. ಆದರೆ, ಈ ವರ್ಷವೇ ನಿವೇಶನ ಸಿಕ್ಕಿ, ಕಟ್ಟಡ ತಲೆಎತ್ತಿ ಕಾಲೇಜು ಆರಂಭ   ಆಗುತ್ತದೆಯೇ? ಎನ್ನುವುದು ಈಗ ಯಕ್ಷಪ್ರಶ್ನೆ!

ನೂತನ ಕಾಲೇಜಿಗೆ ಮೇನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಬೇಕು. ಈಗ ಉಳಿದಿರುವ ಎರಡು ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಕನಸಿನ ಮಾತು. ಜಿಲ್ಲಾಡಳಿತ ಪ್ರಯತ್ನಿಸಿದರೆ, ಅಷ್ಟರೊಳಗೆ ಸೂಕ್ತ ನಿವೇಶನ ಒದಗಿಸಬಹುದಷ್ಟೆ. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಉಪ್ಪಾರಹಳ್ಳಿ ಹೆಂಚಿನ ಕಾರ್ಖಾನೆ ಜಾಗ ಒದಗಿಸುವಂತೆ ಪತ್ರದ ಮೂಲಕ ಕೋರಿದ್ದಾರೆ. ಜಾಗವೇನೋ ಕಾಲೇಜಿಗೆ ಸೂಕ್ತವಾಗಿಯೇ ಇದೆ. ಆದರೆ, ಇದು ಈಗಾಗಲೇ ವಿವಾದ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ, ಮಾರುಕಟ್ಟೆಯ ನೈಜ ಬೆಲೆಯನ್ನು ಈ ನಿವೇಶನಕ್ಕೆ ಒದಗಿಸಿ ತನ್ನದಾಗಿಸಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆಯಿಂದ ಸಾಧ್ಯವೆ? ಎನ್ನುವ ಪ್ರಶ್ನೆಯೂ ಉದ್ಭವಿಸಿವೆ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು.

ಶಿಕ್ಷಣ ಇಲಾಖೆ ಆಯುಕ್ತರು ಉಪ್ಪಾರಹಳ್ಳಿಯ ಜಾಗ ನೀಡುವಂತೆ ಪತ್ರದಲ್ಲಿ ಕೋರಿರುವುದು ನಿಜ. ಆದರೆ, ಇನ್ನೂ ಆ ಜಾಗದ ಸ್ವಾಧೀನ ಪ್ರಕ್ರಿಯೆ ನಡೆಯುತ್ತಲೇ ಇದೆ. ವಾಣಿಜ್ಯ ಉದ್ದೇಶದ ಜಾಗವನ್ನು ಕಾಲೇಜಿಗೆ ಕೊಡುವುದು ಕಷ್ಟ  ಆಗಬಹುದು. ಉಪ್ಪಾರಹಳ್ಳಿ ಜಾಗ ಪಡೆಯಲು ನಗರಪಾಲಿಕೆ ಮತ್ತು ಬೆಸ್ಕಾಂ ಮುಂದೆ ಬಂದಿವೆ. ನೂತನ ಕಾಲೇಜಿಗೆ ಅಗತ್ಯವಿರುವ ನಿವೇಶನದ    ಪರಿಶೀಲನೆ ನಡೆಯುತ್ತಿದೆ. ಸೂಕ್ತ ಜಾಗ ಗುರುತಿಸಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.    ಸೋಮಶೇಖರ್ ಮಂಗಳವಾರ ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ನಗರದಲ್ಲಿದ್ದ ಏಕೈಕ ಸರ್ಕಾರಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಕಾಲೇಜು  ವಿವಿ  ಅಧೀನಕ್ಕೆ ಒಳಪಟ್ಟ ಮೇಲೆ ಯುಜಿಸಿ ನಿಯಮಾವಳಿ  ಅನ್ವಯವಾಗಿ, ಪ್ರವೇಶ ಸಂಖ್ಯೆ ಕಡಿತಗೊಂಡಿದೆ. ಹಿಂದಿನ ವರ್ಷದ ಬಜೆಟ್‌ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುಮಕೂರು ನಗರಕ್ಕೆ ನೂತನ ಪದವಿ ಕಾಲೇಜು ಘೋಷಿಸಿದ್ದರು. ನೂತನ ಕಾಲೇಜು ಕಳೆದ ಶೈಕ್ಷಣಿಕ ವರ್ಷವೂ ಆರಂಭ     ಆಗಲಿಲ್ಲ. ವಿ.ವಿ ಪದವಿ ಕಾಲೇಜಿನಲ್ಲಿ ಪ್ರವೇಶ ವಂಚಿತಗೊಂಡ   ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಪರ  ಸಂಘಟನೆಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದ ನಂತರ, ವಿ.ವಿ ಸಂಯೋಜಿತ ಕಾಲೇಜುಗಳಲ್ಲಿ ಪ್ರವೇಶ ನೀಡಲಾಯಿತು. ಶಿಕ್ಷಣ ಇಲಾಖೆ    ಆಯುಕ್ತರು ಕೂಡ ಖುದ್ದು ನಗರಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ಅಹವಾಲು ಆಲಿಸಿ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ನೂತನ ಕಾಲೇಜು ಆರಂಭಕ್ಕೆ ಎಲ್ಲ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿ.ವಿ.ಯ ವಿಜ್ಞಾನ ಕಾಲೇಜಿಗೆ 682, ಕಲಾ ವಿಭಾಗಕ್ಕೆ 867 ಹಾಗೂ ವಾಣಿಜ್ಯ ವಿಭಾಗಕ್ಕೆ 1986 ಅರ್ಜಿಗಳನ್ನು ವಿದ್ಯಾರ್ಥಿಗಳು ಸಲ್ಲಿಸಿದ್ದರು. ಯುಜಿಸಿ ನಿಯಮಾವಳಿ ಮುಂದಿಟ್ಟು, ಪ್ರತಿ ತರಗತಿಗೆ 60 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಯಿತು. ಪ್ರವೇಶ ವಂಚಿತ ವಿದ್ಯಾರ್ಥಿಗಳು ಹೋರಾಟದ ಹಾದಿ ಹಿಡಿದು, ಪರಿಸ್ಥಿತಿ ಕಗ್ಗಂಟಾಗಿತ್ತು. ಅಂತಿಮ ಪರಿಹಾರವಾಗಿ ವಿ.ವಿ ಒದಗಿಸಿದ ಸಂಯೋಜಿತ ಕಾಲೇಜುಗಳಲ್ಲಿ ಪ್ರವೇಶ ಪಡೆದವರು ಹಲವು ಬಗೆಯ ಇರುಸು-ಮುರುಸು ಅನುಭವಿಸುತ್ತಿದ್ದರೂ ಹೇಳಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ ಎನ್ನುತ್ತಾರೆ ಹೆಸರು ಬಯಸದ ಅಧ್ಯಾಪಕರೊಬ್ಬರು.

ಸರ್ಕಾರ ಈ ಬಾರಿ ಅಂತಹ ಸಮಸ್ಯೆ ಮರುಕಳುಹಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದಾದರೂ ತಾತ್ಕಾಲಿಕ ಕಟ್ಟಡವನ್ನಾದರೂ ಪಡೆದು, ಪದವಿ ಕಾಲೇಜು ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕು. ಸೂಕ್ತ ನಿವೇಶನ ಲಭ್ಯವಾಗದಿದ್ದರೆ ವಿ.ವಿ. ಪದವಿ ಕಾಲೇಜಿನ ಕ್ಯಾಂಪಸ್‌ನಲ್ಲೇ ನೂತನ ಕಾಲೇಜಿಗೂ ಜಾಗ ಒದಗಿಸಬೇಕು ಎನ್ನುವುದು ವಿವಿಧ ವಿದ್ಯಾರ್ಥಿ ಸಂಘಟನೆಗಳ ಮುಖಂಡರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.