ADVERTISEMENT

ಬಾನಾಮತಿ ಭೀತಿ ಬೇಡ:ನಟರಾಜ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 9:45 IST
Last Updated 7 ಫೆಬ್ರುವರಿ 2011, 9:45 IST

ಗುಬ್ಬಿ: ಕಳೆದ ಮೂರು ತಿಂಗಳಿನಿಂದ ಬಾನಾಮತಿ ಭೀತಿಯಲ್ಲಿ ನಲುಗಿದ್ದ ತಾಲ್ಲೂಕಿನ ಕಡಬ ಹೋಬಳಿ ಮಾದಾಪಟ್ಟಣ ಗ್ರಾಮಸ್ಥರಿಗೆ, ನಡೆಯುತ್ತಿರುವ ಬೆಂಕಿ ಅನಾಹುತ ಮಾನವ ನಿರ್ಮಿತ, ಬಾನಾಮತಿ ಅಲ್ಲ ಎಂಬುದನ್ನು ಪವಾಡ ಸಂಶೋಧನಾ ಕೇಂದ್ರದ ಹುಲಿಕಲ್ ನಟರಾಜು ಭಾನುವಾರ ರುಜುವಾತು ಮಾಡಿದರು.

15ಕ್ಕೂ ಅಧಿಕ ಹುಲ್ಲಿನ ಬಣವೆ ಹಾಗೂ 3 ಮನೆಗಳಿಗೆ ಬೆಂಕಿಬಿದ್ದ ಹಿನ್ನೆಲೆಯಲ್ಲಿ ಬಾನಾಮತಿಯ ಕೃತ್ಯ ಎಂದು ಭಾವಿಸಿದ್ದ ಗ್ರಾಮಸ್ಥರು ಗ್ರಾಮ ತೊರೆಯುವ ನಿರ್ಧಾರ ಕೈಗೊಂಡಿದ್ದರು.ಬಾನಾಮತಿಯ ಭೀತಿ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಮಾದಾಪಟ್ಟಣ ಗ್ರಾಮಕ್ಕೆ ಭೇಟಿ ನೀಡಿದ ಹುಲಿಕಲ್ ನಟರಾಜು ಅಲ್ಲಿನ ವಸ್ತು ಸ್ಥಿತಿ ಅವಲೋಕಿಸಿ ಯಾವುದೇ ದೈವ ಹಾಗೂ ಭೂತ ಚೇಷ್ಟೆ ಇದಲ್ಲ. ಮಾನಸಿಕವಾಗಿ ವಿಚಲಿತಗೊಂಡ ವ್ಯಕ್ತಿಯೋರ್ವನ ಕೃತ್ಯ ಇದಾಗಿದೆ ಎಂಬುದನ್ನು ಆಧಾರ ಸಹಿತ ಸಾಬೀತು ಪಡಿಸಿದರು.

ತಹಶೀಲ್ದಾರ್ ಎಚ್.ಜ್ಞಾನೇಶ್ ಹಾಗೂ ನಟರಾಜು ಗ್ರಾಮಕ್ಕೆ ಬಂದ ಕ್ಷಣದಲ್ಲೇ ಇದ್ದಕ್ಕಿದ್ದ ಹಾಗೇ ಮನೆಯಲ್ಲಿ ತೆಂಗಿನಕಾಯಿಯ ಮೇಲೆ ಕಾಣಿಸಿಕೊಂಡ ಬೆಂಕಿಯ ಜಾಡು ಹಿಡಿದು ಪತ್ತೆದಾರಿ ನಡೆಸಿದ ಹುಲಿಕಲ್ ನಟರಾಜು ಅಲ್ಲಿ ಸಿಕ್ಕ ಸೀಮೆಎಣ್ಣೆ ಚುಮಣಿ ಹಾಗೂ ಬೆಂಕಿಕಡ್ಡಿ ಆಧರಿಸಿ ಜಾಡು ಹಿಡಿದು ವ್ಯಕ್ತಿಯೊಬ್ಬನ ಸುಪ್ತ ಮನಸ್ಥಿತಿ ಈ ಘಟನೆಗೆ ಕಾರಣ ಎಂಬುದನ್ನು ಕಂಡು ಹಿಡಿದರು.

ನಂತರ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ ನಟರಾಜು ಪವಾಡಗಳ ಬಯಲು ಹೇಗೆ ಸಾಧ್ಯ ಎಂಬುದನ್ನು ಪ್ರಾಯೋಗಿಕವಾಗಿ ರುಜುವಾತು ಮಾಡಿದರು. ಗ್ರಾಮದಲ್ಲಿನ ಅಂಧಕಾರ ಅಲ್ಲಗಳೆದ ಅವರು ಇದುವರೆವಿಗೂ ನಡೆದ ಬೆಂಕಿ ಅನಾಹುತಗಳು ಮಾನವ ನಿರ್ಮಿತ ಕೃತ್ಯ ಎಂಬುದು ತಿಳಿ ಹೇಳಿದ ಬಳಿಕವೇ ಗ್ರಾಮಸ್ಥರು ನೆಮ್ಮದಿಯ ಉಸಿರು ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.