ತುಮಕೂರು: ನಗರದ ಶಿರಾಗೇಟ್ ಬಡಾವಣೆಯ ಎಸ್.ಎನ್.ಪಾಳ್ಯದಲ್ಲಿ ಭಾನುವಾರ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಾಲ್ಯ ವಿವಾಹ ಪ್ರಯತ್ನಕ್ಕೆ ತಡೆಯೊಡ್ಡಿದ್ದಾರೆ.
ಕೂಲಿಕಾರ್ಮಿಕ ಜಯಣ್ಣನ ಮಗಳು ಲಕ್ಷ್ಮಿಯ (16) ವಿವಾಹ ವೈ.ಎನ್. ಹೊಸಕೋಟೆ ಆದಿನಾರಾಯಣ ಅವರೊಂದಿಗೆ ನಿಶ್ಚಯವಾಗಿತ್ತು. ಆದಿನಾರಾಯಣ ಸಹ ಜಯಣ್ಣನಿಗೆ ಹತ್ತಿರದ ಸಂಬಂಧಿ. ಶನಿವಾರ ರಾತ್ರಿಯಿಂದಲೇ ವಿವಾಹದ ವಿಧಿಗಳು ಪ್ರಾರಂಭವಾಗಿದ್ದವು. ಭಾನುವಾರ ಮುಂಜಾನೆ ಮಾಂಗಲ್ಯ ಧಾರಣೆಯ ವೇಳೆಗೆ ಸ್ಥಳಕ್ಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿವಾಹವನ್ನು ನಿಲ್ಲಿಸಿದರು.
ಬಾಲ್ಯ ವಿವಾಹದಿಂದ ಆಗುವ ಅಪಾಯಗಳನ್ನು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ರಾಮು ವಿವರಿಸಿ, ಹುಡುಗಿಗೆ 18 ವರ್ಷ ಆಗುವವರೆಗೆ ವಿವಾಹ ನಡೆಸುವುದಿಲ್ಲ ಎಂದು ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡರು.
ಮದುವೆಗೆಂದು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದ ಹುಡುಗಿಯ ಪೋಷಕರು ಮುಂದೇನು ಎಂಬ ಆತಂಕದಲ್ಲಿದ್ದರು. ಅಡಿಗೆ ಅರ್ಧಕ್ಕೆ ನಿಂತಿತ್ತು. ಮದುವೆಗೆಂದು ಬಂದಿದ್ದ ನೆಂಟರು ಮತ್ತು ಗೆಳೆಯರು ಆತಂಕದಿಂದ ಜಾಗ ಖಾಲಿ ಮಾಡಿದರು.
ಹುಡುಗ- ಹುಡುಗಿ ಸಹ ಪೊಲೀಸರಿಗೆ ಹೆದರಿ ಯಾವುದೋ ಮನೆಯಲ್ಲಿ ಅಡಗಿಕೊಂಡಿದ್ದರು. ಅಧಿಕಾರಿಗಳು ಅವರ ಮನವೊಲಿಸಿ ಕರೆತರುವಷ್ಟರಲ್ಲಿ ಸಾಕುಸಾಕಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.