ತುಮಕೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿಗೆ ದೇಶದ ಮೇಲೆ ನಿಜವಾದ ವ್ಯಾಮೋಹ ಇಲ್ಲ. ವ್ಯಾಮೋಹ ಇದ್ದವರಾದರೆ ದೇಶದ ಪ್ರತಿ ಪ್ರಜೆಯನ್ನೂ ಪ್ರೀತಿಸುತ್ತಾರೆ. ದೇಶಪ್ರೇಮವನ್ನು ಮೋದಿ ಅಧಿಕಾರ ಹಿಡಿಯಲು ಚುನಾವಣಾ ಬತ್ತಳಿಕೆ ಮಾಡಿಕೊಂಡಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅಭಿಪ್ರಾಯಪಟ್ಟರು.
ತುಮಕೂರು ವಿ.ವಿ ಕನ್ನಡ ಅಧ್ಯಯನ ಕೇಂದ್ರ ಗುರುವಾರ ಆಯೋಜಿಸಿದ್ದ ಸಾಹಿತ್ಯ, ಭಾಷೆ, ಸಂಸ್ಕೃತಿ ಹಾಗೂ ರಾಜಕೀಯ ಕುರಿತ ಸಂವಾದದಲ್ಲಿ ಮಾತನಾಡಿದರು.
ದೇಶ ಆಳಬೇಕಾದರೆ ಒಬ್ಬ ವ್ಯಾಪಾರಿಗಿಂತ ಒಬ್ಬ ಗುಣವಂತ ಮುಖ್ಯ. ಕೊಲೆಗಾರ, ನಿರಂಕುಶವಾದಿ ಅಲ್ಲ. ಕಡಿಮೆ ಅವಧಿ ಪ್ರಧಾನಿಯಾಗಿದ್ದರೂ ಎಚ್.ಡಿ.ದೇವೇಗೌಡರು ಪ್ರಾಮಾಣಿಕರಾಗಿದ್ದರು, ಉತ್ತಮ ಆಡಳಿತ ನೀಡಿದ್ದರು. ನರೇಂದ್ರಮೋದಿಗಿಂತ ದೇವೇಗೌಡರು ದೇಶದ ಪ್ರಧಾನಿಗೆ ಉತ್ತಮ ನಾಯಕ ಎಂದು ಸಾಹಿತಿ ಪ್ರೊ.ಮರಿದೇವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನರೇಂದ್ರಮೋದಿಗಿಂತಲೂ ಜಾತ್ಯತೀತವಾದಿ ಅಡ್ವಾಣಿ ಆಯ್ಕೆ ಒಳ್ಳೆಯದು. ಆದರೆ ಅಡ್ವಾಣಿ ಮತ್ತು ನರೇಂದ್ರಮೋದಿ ಇಬ್ಬರಿಗೂ ನಾನು ಮತ ಹಾಕುವುದಿಲ್ಲ. ಎಎಪಿ ಪಕ್ಷದ ಒರಟು ಗಾಂಧಿವಾದ ಈಗ ಬೇಕಾಗಿದೆ ಎಂದು ಕಾರ್ಯಕ್ರಮದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಪ್ರಶ್ನೆಗೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರಕ್ಕಿಂತ ಕೋಮುವಾದವೇ ಹೆಚ್ಚು ಅಪಾಯಕಾರಿ. ಎರಡನ್ನೂ ವಿರೋಧಿಸಬೇಕು. ಆದರೆ ಕೋಮುವಾದಿಗಳು ದೇಶಕ್ಕೆ ಹೆಚ್ಚು ಅಪಾಯಕಾರಿ. ಭ್ರಷ್ಟಚಾರವನ್ನು ನಿಯಂತ್ರಿಸಬಹುದು. ಆದರೆ ಕೋಮುವಾದ ವಿನಾ ಕಾರಣ ಜನರನ್ನು ಕೊಲ್ಲುತ್ತದೆ. ಗರ್ಭಿಣಿ ಮಹಿಳೆಯ ಹೊಟ್ಟೆ ಸೀಳಿದ ಜನರನ್ನು ಹೇಗೆ ಸ್ವೀಕರಿಸುವುದು ಎಂದು ಕೇಳಿದರು.
ಬಾವುಟ ಸುಡುವವರು ದೇಶದ್ರೋಹಿಗಳಾಗಿ ಕಂಡರೆ ಸಂಪಾದನೆಯನ್ನು ಸ್ವಿಸ್ ಬ್ಯಾಂಕ್ನಲ್ಲಿ ಇಡುವವರು ದೇಶದ್ರೋಹಿಗಳಲ್ಲವೆ? ಎಂದು ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ನಿತ್ಯಾನಂದ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದರು.
ಕೋಮುವಾದಿಗಳಿಂದ ಪ್ರತಿ ಊರಲ್ಲೂ ಭಯದ ವಾತಾವರಣವಿದೆ. ಶಾಲೆಗೆ ಹೋದ ಮಕ್ಕಳು ವಾಪಸ್ ಬರುವವರೆಗೂ ಭಯದಲ್ಲೇ ಇರಬೇಕಿದೆ. ಇಲ್ಲಿರುವ ಮುಸ್ಲಿಮರನ್ನು ಎಲ್ಲಿಗೆ ಕಳುಹಿಸಲು ಸಾಧ್ಯ. ಅವರು ಇಲ್ಲಿಯೇ ಇರಬೇಕು. ಮುಸಲ್ಮಾನರೊಂದಿಗೆ ಒಡನಾಟ ಕಡಿಮೆಯಾಗುತ್ತಿದೆ. ಅವರಿಗೂ ದೇಶದ ಕುರಿತು ಅನಿಸಿಕೆ, ಒಳ ನೋಟಗಳಿವೆ. ಅವರೊಂದಿಗೆ ನಮ್ಮ ಒಡನಾಟ ಬೆಳೆಸಿಕೊಳ್ಳಬೇಕು. ಆದರೆ ಇದು ಆಗುತ್ತಿಲ್ಲ ಎಂದು ನೊಂದು ನುಡಿದರು. ಪರೀಕ್ಷಾಂಗ ಕುಲ ಸಚಿವ ಪ್ರೊ.ಎನ್.ಬಿ.ನಡುವಿನಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.