ADVERTISEMENT

ಮಠಗಳು ವೈಚಾರಿಕ ಪ್ರಜ್ಞೆ ಬೆಳೆಸಲಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 5:28 IST
Last Updated 1 ಡಿಸೆಂಬರ್ 2012, 5:28 IST

ತಿಪಟೂರು: ಮಠಗಳು ಜನರಲ್ಲಿ ವೈಚಾರಿಕ ಪ್ರಜ್ಞೆ, ವಿಮರ್ಶಾತ್ಮಕ ಶಕ್ತಿ ಬೆಳೆಸಿದರೆ ಸಮಾಜ ಸ್ವಾಸ್ಥ್ಯದ ನಡೆ ಸುಗಮವಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಹೀ.ಚಿ.ಬೋರಲಿಂಗಯ್ಯ ತಿಳಿಸಿದರು.

ನಗರದ ಸಿಡ್ಲೇಹಳ್ಳಿ ಮಠದ ಗುರುಕುಲಾನಂದಾಶ್ರಮದಲ್ಲಿ ಶುಕ್ರವಾರ ನಡೆದ ಹಿರಿಯ ಸ್ವಾಮೀಜಿಯ 102ನೇ ಸಂಸ್ಮರಣೆ ಧ್ಯಾನ ಮಂದಿರ ಲೋಕಾರ್ಪಣೆ, ಪ್ರಸ್ತುತ ಸ್ವಾಮೀಜಿಯ 16ನೇ ಪೀಠಾರೋಹಣ ಹಾಗೂ ಶರಣ ಧರ್ಮ ಚಿಂತನಾ ಸಮಾರಂಭದಲ್ಲಿ ಸದಾಶಿವಯೋಗಿ ಅವರ `ನಾ ಕಂಡ ರಾಮಾಯಣ' ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೌನ ಸಮ್ಮತಿಗೆ ಮನಸ್ಸು ಒಗ್ಗಿಸುವ ಬದಲು ಸರಿ-ತಪ್ಪುಗಳ ಆಲೋಚನ ಕ್ರಮ ಬೆಳೆಸುವುದು ಮುಖ್ಯ ಎಂದರು.

ರಾಜರಿಗಿಂತ ಮುಖ್ಯವಾಗಿ ಪ್ರಜಾ ಕೇಂದ್ರಿತವಾದ ಪುರಾಣಗಳು ಜೀವನದ ಉನ್ನತೀಕರಣದ ಧ್ಯೇಯ ಹೊಂದಿದ್ದವು. ಸ್ವಹಿತಾಸಕ್ತಿ ಶಕ್ತಿಗಳು ತಿದ್ದಿದ ಪುರಾಣಗಳು ಇಂದು ದಾರಿ ತಪ್ಪಿಸುತ್ತಿವೆ. ವಾಲ್ಮೀಕಿ ಮೂಲ ರಾಮಾಯಣದಲ್ಲೇ, ರಾಮ ಸೀತೆಗಾಗಿ ರಾವಣನನ್ನು ಸೋಲಿಸಿದ್ದಲ್ಲ. ಸಾಮ್ರೋಜ್ಯ ವಿಸ್ತರಣೆಗಾಗಿ ಎಂಬುದಿದೆ ಎಂದರು.

ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು. ಕ್ಯಾನ್ಸರ್ ತಜ್ಞ ಡಾ. ಎಂ.ಎಸ್. ಚಂದ್ರಮೌಳಿ `ಗುರುಕುಲ ಶ್ರೀ' ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.

ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಉಮೇಶ್, ಮಾಜಿ ಶಾಸಕ ಕೆ.ಷಡಕ್ಷರಿ, ಗಾಂಧಿ ಭವನ ಕಾರ್ಯದರ್ಶಿ ಪ್ರೊ.ಜಿ.ಬಿ.ಶಿವರಾಜು ಮತ್ತಿತರರು ಮಾತನಾಡಿದರು. ದಾನಿ ಆನಂದರಾಜ್, ಎಸ್.ರುದ್ರಪ್ಪ, ಬಿ.ನಿರಂಜನ್, ಎಸ್.ಜಿ.ಸಿದ್ದರಾಮೇಗೌಡ, ಪ್ರೊ.ಜೆ.ಸಿ.ಚನ್ನಬಸಪ್ಪ, ಡಾ.ಎಂ.ಎಸ್.ಮಹಾಲಿಂಗಪ್ಪ, ಚನ್ನೇಗೌಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.