ಶಿರಾ: ತಾಲ್ಲೂಕಿನ ಬಸವನಹಳ್ಳಿಯಲ್ಲಿ ಹಲವು ತಿಂಗಳುಗಳಿಂದ ಚಿಲ್ಲರೆ ಅಂಗಡಿಗಳಲ್ಲಿ ಹಗಲು ರಾತ್ರಿ ಮದ್ಯ ಮಾರಾಟ ನಡೆಯುತ್ತಿದ್ದು, ಮಹಿಳೆಯರಿಗೆ ನಿತ್ಯ ಕಿರಿಕಿರಿ ಆಗುತ್ತಿದೆ ಎಂದು ಎಂದು ಸ್ತ್ರೀಶಕ್ತಿ ಸಂಘದ ಮಹಿಳೆಯರು ಗ್ರಾಮದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.
ತಮ್ಮ ಗಂಡಂದಿರು ನಿತ್ಯದ ಕೂಲಿ ಹಣವನ್ನು ಕುಡಿತಕ್ಕೆ ಹಾಳು ಮಾಡುತ್ತಿದ್ದಾರೆ ಬರದಿಂದ ಕೂಲಿ ಇಲ್ಲದೆ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಈ ಸ್ಥಿತಿಯಲ್ಲಿ ಬದುಕು ನಡೆಸುವುದು ತೀರ ದುಸ್ತರವಾಗಿದೆ ಎಂದು ಮಹಿಳೆಯರು ದೂರಿದರು.
ಗಂಡಂದಿರು ಕುಡಿದು ಬಂದು ರಾತ್ರಿ ವೇಳೆ ಮಕ್ಕಳಿಗೆ ಗಲಾಟೆ ಮಾಡುತ್ತಿದ್ದು, ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದರಿಂದ ಜೀವನವೇ ಸಾಕು ಸಾಕಾಗಿ ಹೋಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.
ಈ ಬಗ್ಗೆ ಅಬಕಾರಿ ಮತ್ತು ಪೋಲಿಸ್ ಇಲಾಖೆಯ ಗಮನಕ್ಕೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಕ್ಕದ ಯಾದಲಡಕು, ಕೆ.ಕೆ.ಪಾಳ್ಯ ಗ್ರಾಮದಿಂದಲೂ ಮದ್ಯಪಾನ ಮಾಡಲು ಬಸವನಹಳ್ಳಿಗೆ ಬರುತ್ತಿದ್ದಾರೆ.
ಹೆಣ್ಣು ಮಕ್ಕಳು ಊರಲ್ಲಿ ಓಡಾಡುವುದೇ ಕಷ್ಟವಾಗಿದೆ. ಆದ್ದರಿಂದ ಬೆಸತ್ತು ಪ್ರತಿಭಟನೆಗೆ ಇಳಿದಿರುವುದಾಗಿ ಮಹಿಳೆಯರು ತಿಳಿಸಿದರು. ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವ ಅಂಗಡಿಗೆ ತೆರಳಿದ ಮಹಿಳೆಯರು ಮಾರಾಟ ಮಾಡದಂತೆ ಎಚ್ಚರಿಸಿದರು.
ಶ್ರೀದೇವಿ, ಲಕ್ಷ್ಮೀ, ಮಹಾಲಕ್ಷ್ಮೀ ಸ್ತ್ರೀ ಸಂಘಗಳ ಜ್ಯೋತಿ, ಶಾರದಮ್ಮ, ಲಕ್ಷ್ಮಕ್ಕ, ಪುಷ್ಪ ಸೇರಿದಂತೆ ಹಲವು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.