ಕುಣಿಗಲ್: ತಾಲ್ಲೂಕಿನಾದ್ಯಂತ ಕಳೆದ ವಾರ ಸಾಕಷ್ಟು ಮಳೆ ಬಿದ್ದ ಕಾರಣ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಹಕಾರ ಸಂಘಗಳಿಗೆ ರಸಗೊಬ್ಬರ ಬರುವುದು ವಿಳಂಬವಾಗಿದೆ. ಕೆಲ ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ಬಂದಿರುವ ರಸಗೊಬ್ಬರ ಖರೀದಿಗಾಗಿ ರೈತರು ಮುಗಿಬೀಳುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು ಸಮಸ್ಯೆಗೆ ಕಾರಣ.
ಮುಂದಿನ ವಾರದೊಳಗೆ ರಸಗೊಬ್ಬರ ಹಾಕದಿದ್ದರೆ ಬೆಳೆ ಕೈತಪ್ಪಿ ಹೋಗುವುದೆಂಬ ಆತಂಕದಿಂದಿ ರೈತರು ಪ್ರತಿದಿನ ಗೊಬ್ಬರಕ್ಕಾಗಿ ಗ್ರಾಮೀಣ ಪ್ರದೇಶದ ರೈತರ ಸೇವಾ ಸಹಕಾರ ಸಂಘ ಮತ್ತು ತಾಲ್ಲೂಕು ಕೇಂದ್ರದ ರಸಗೊಬ್ಬರ ಅಂಗಡಿಗಳಿಗೆ ಎಡತಾಕುವುದು ಸಾಮಾನ್ಯವಾಗಿದೆ.
ತಾಲ್ಲೂಕಿನಲ್ಲಿ 6,500 ಹೆಕ್ಟೇರ್ ಭತ್ತ, 26,500 ಹೆಕ್ಟೇರ್ ರಾಗಿ ಹಾಗೂ 2,000 ಹೆಕ್ಟೇರ್ ಕಬ್ಬು ಹಾಕಲಾಗಿದೆ. ಸೆಪ್ಟಂಬರ್ ಅಂತ್ಯದವರೆಗೆ 3,600 ಟನ್ ರಸಗೊಬ್ಬರ ಬೇಡಿಕೆ ಇದ್ದು, ಈಗಾಗಲೇ 3,000 ಸಾವಿರ ಟನ್ ಗೊಬ್ಬರ ಸರಬರಾಜಾಗಿದೆ.
ಶೀಘ್ರ 400 ಟನ್ ರಸಗೊಬ್ಬರವನ್ನು ತಾಲ್ಲೂಕಿನ 16 ರೈತರ ಸೇವಾ ಸಹಕಾರ ಸಂಘಗಳಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗಿದ್ದು ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ತಿಳಿಸಿದ್ದಾರೆ.
ಕುಣಿಗಲ್ ತಾಲ್ಲೂಕಿಗೆ ಹೊಂದಿ ಕೊಂಡಿರುವ ಮಾಗಡಿ ತಾಲ್ಲೂಕಿನ ರೈತರು ರಸಗೊಬ್ಬರವನ್ನು ಕುಣಿಗಲ್ನಲ್ಲಿ ಖರೀದಿ ಮಾಡುತ್ತಿರುವುದರಿಂದ ತಾತ್ಕಾಲಿಕ ಅಭಾವ ಉಂಟಾಗಿದೆ ಎಂದು ರಸಗೊಬ್ಬರ ಅಂಗಡಿ ಮಾಲೀಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.