ADVERTISEMENT

ಮುಂದುವರಿದ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 9:40 IST
Last Updated 13 ಅಕ್ಟೋಬರ್ 2011, 9:40 IST

ಕುಣಿಗಲ್: ಅಗತ್ಯ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರು ಹಾಗೂ ನೇತ್ರಾವತಿ ಡಿಸ್ಟಿಲರೀಸ್ ಆಡಳಿತ ಮಂಡಲಿಯ ಶೀತಲ ಸಮರ ತಾರಕಕ್ಕೇರಿದ್ದು, ಬುಧವಾರವೂ ಪ್ರತಿಭಟನೆ ಮುಂದುವರೆಯಿತು.

ಕಾರ್ಮಿಕರಿಗೆ ಬೆಂಬಲ ಸೂಚಿಸಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎನ್.ಜಗದೀಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯತ್ರಿರಾಜು, ಕಾರ್ಮಿಕ ಮುಖಂಡ ಅಬ್ದುಲ್‌ಮುನಾಫ್, ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ಗಾಯತ್ರಿ ರಾಜು ಮಾತನಾಡಿ, ತಾಲ್ಲೂಕಿನ ವಿವಿಧ ಮೂಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು 4 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಇದುವರೆವಿಗೂ ಕಾನೂನು ಬದ್ಧವಾದ ಯಾವುದೇ ಸೌಲಭ್ಯ ನೀಡಿಲ್ಲ. ಪ್ರತಿ ದಿನ 10ಗಂಟೆ ದುಡಿಮೆ ಅವಧಿ ನಿಗದಿಗೊಳಿಸಿರುವ ಆಡಳಿತ ಮಂಡಲಿ ಈ ಅವಧಿಯಲ್ಲಿ 30 ನಿಮಿಷ ಊಟ-ತಿಂಡಿಯ ವಿರಾಮ ನೀಡುತ್ತಿದ್ದಾರೆ.

ಬಾಟಲಿಂಗ್ ಘಟಕದಲ್ಲಿ ಆಗ್ಗಿಂದಾಗ್ಗೆ ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗುತ್ತಿದ್ದು, ಚಿಕಿತ್ಸೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಮಿಕರ ವೇತನದಲ್ಲಿ ಪ್ರತಿ ತಿಂಗಳು 450ರಿಂದ 500 ರೂಪಾಯಿ ಭವಿಷ್ಯನಿಧಿ ಹಣ ಕಡಿತಗೊಳಿಸುತ್ತಿರುವ ಆಡಳಿತ ಮಂಡಲಿ 180 ರೂಪಾಯಿ ನಮೂದಿಸುತ್ತಿರುವುದಾಗಿ ತಿಳಿಸಿದರೂ; ಸಮರ್ಪಕ ದಾಖಲೆ ಒದಗಿಸಿಲ್ಲ ಎಂದು ಆರೋಪಿಸಿದರು.

ಸಂಜೆ 5ಗಂಟೆವರೆವಿಗೂ ಕಾರ್ಮಿಕರು, ಕುಟುಂಬ ವರ್ಗ, ಜನಪ್ರತಿನಿಧಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಮತ್ತು ಆಡಳಿತ ಮಂಡಲಿಯವರೊಂದಿಗೆ ಮಾತುಕತೆ ನಡೆಸಿದ್ದು, ಆಡಳಿತ ಮಂಡಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕಾರ್ಖಾನೆ ಮುಚ್ಚುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಸಮಸ್ಯೆ ಬಗೆಹರಿಯುವವರೆವಿಗೂ ಪ್ರತಿಭಟನೆ ಮುಂದುವರೆಸುವುದಾಗಿ ಕಾರ್ಮಿಕ ಪ್ರತಿನಿಧಿಗಳು ತಿಳಿಸಿದ್ದಾರೆ.

ವೆಂಕಟಮ್ಮನಹಳ್ಳಿ ಹತ್ಯಾಕಾಂಡ ಶೀಘ್ರ ತೀರ್ಪು ಪ್ರಕಟ: ಎಸ್‌ಪಿ
ಪಾವಗಡ:ವೆಂಕಟಮ್ಮನಹಳ್ಳಿ ಹತ್ಯಾಕಾಂಡ ಕುರಿತ ತೀರ್ಪು ಶೀಘ್ರದಲ್ಲೆ ಬರಲಿದ್ದು, ತಾಲ್ಲೂಕಿನ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಎಸ್‌ಪಿ ಟಿ.ಆರ್.ಸುರೇಶ್ ತಿಳಿಸಿದರು.

ಘಟನೆ ಕುರಿತು ಜಿಲ್ಲಾ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಶೀಘ್ರದಲ್ಲೆ ಪ್ರಕರಣದ ತೀರ್ಪು ಪ್ರಕಟಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಮತ್ತೆ ನಕ್ಸಲ್ ಚಟುವಟಿಕೆಗಳು ಗರಿಗೆದರಿದ್ದು, ಪಾವಗಡದಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ. ಯಾವುದೇ ವಿಶೇಷ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು. ಮಧುಗಿರಿ ಡಿವೈಎಸ್‌ಪಿ ಪ್ರದೀಪ್‌ಕುಮಾರ್, ವೃತ್ತ ನಿರೀಕ್ಷಕ ಶೇಷಾದ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.