ADVERTISEMENT

ಮುದ್ದಪುರದಲ್ಲಿ ಸಂತಸದ ವಾತಾವರಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2014, 5:09 IST
Last Updated 9 ಫೆಬ್ರುವರಿ 2014, 5:09 IST
ಗುಬ್ಬಿ ತಾಲ್ಲೂಕು ಮುದ್ದಪುರಕ್ಕೆ ಶನಿವಾರ ಭೇಟಿ ನೀಡಿದ್ದ ಜರ್ಮನಿ ಅಧ್ಯಕ್ಷ ಜೋಕಿಮ್‌ಗೌಕ್‌ ದಂಪತಿ ಶಾಲಾ ಮಕ್ಕಳಿಗೆ ಶುಭಾಶಯ ಹೇಳಿದರು.
ಗುಬ್ಬಿ ತಾಲ್ಲೂಕು ಮುದ್ದಪುರಕ್ಕೆ ಶನಿವಾರ ಭೇಟಿ ನೀಡಿದ್ದ ಜರ್ಮನಿ ಅಧ್ಯಕ್ಷ ಜೋಕಿಮ್‌ಗೌಕ್‌ ದಂಪತಿ ಶಾಲಾ ಮಕ್ಕಳಿಗೆ ಶುಭಾಶಯ ಹೇಳಿದರು.   

ತುಮಕೂರು: ಐವತ್ತು ಕುಟುಂಬಗಳ ಕುಗ್ರಾಮ ಮುದ್ದಪುರ. ಇಲ್ಲಿಗೆ ಶನಿವಾರ ಜರ್ಮನಿ ಅಧ್ಯಕ್ಷರು ಭೇಟಿ ನೀಡುತ್ತಾರೆ ಎಂಬುದೇ ವಿಶೇಷವಾಗಿತ್ತು. ಗ್ರಾಮದಲ್ಲಿ ತಳಿರು ತೋರಣ ಕಟ್ಟಿ ಅಧ್ಯಕ್ಷರನ್ನು ಸ್ವಾಗತಿಸಲು ಸಿಂಗಾರ ಮಾಡಲಾಗಿತ್ತು.

ಜರ್ಮನಿ ಅಧ್ಯಕ್ಷ ಜೋಕಿಮ್‌ಗೌಕ್‌ ಅವರಿಗೆ ಹಾಲು ಕರೆಯುವುದನ್ನು ತೋರಿಸಲು ಗ್ರಾಮದ ಶಿವಮ್ಮ,  ಮಂಜುಳಾ ಸಿದ್ಧರಾಗಿದ್ದರು. ಹಾರೆ­ಯಲ್ಲಿ ಕಾಯಿ ಸುಲಿಯುವುದನ್ನು ತೋರಿ­ಸಲು ಕಲ್ಲೇಶ್‌ ಹಾಜರಿದ್ದರು. ನಮ್ಮ ಸಾಮಾನ್ಯ ಕೃಷಿ ಬದುಕನ್ನು ನೋಡಲು ಜರ್ಮನಿ ಅಧ್ಯಕ್ಷರು ಬರು­ತ್ತಿರು­ವುದಕ್ಕೆ ಖುಷಿಯಾಗಿದೆ ಎಂದರು ಕಲ್ಲೇಶ್‌.

ಚುನಾವಣೆ ಸಂದರ್ಭ ಹೊರತು­ಪಡಿಸಿದರೆ ನಮ್ಮ ರಾಜಕಾರಣಿಗಳು ಯಾರೂ ಗ್ರಾಮಕ್ಕೆ ಬಂದಿರಲಿಲ್ಲ. ಈಗ ಜರ್ಮಿನಿ ಅಧ್ಯಕ್ಷರು ಭೇಟಿ ನೀಡುತ್ತಿದ್ದು, ನಮ್ಮ ಗ್ರಾಮದ ಹೆಸರು ವಿಶ್ವಕ್ಕೆ ತಿಳಿಯುತ್ತಿರುವುದು ಸಂತೋಷದ ವಿಷಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಸಿದ್ದರಾಮೇಶ್‌ ಹೇಳಿದರು.

ಜರ್ಮನಿ ಅಧ್ಯಕ್ಷರು ಗ್ರಾಮಕ್ಕೆ ಬಂದು ಸಹಜವಾಗಿ ಎಲ್ಲರೊಡನೆ ಮಾತನಾಡಿ­ದಾಗ ಗ್ರಾಮಸ್ಥರು ಮತ್ತಷ್ಟು ಖುಷಿಯಾದರು.

ಪತ್ರಕರ್ತರು ಹೊರಗೆ
ಜರ್ಮನಿ ಅಧ್ಯಕ್ಷ ಜೋಕಿಮ್‌ಗೌಕ್‌ ಮುದ್ದಪುರ ಮತ್ತು ತ್ಯಾಗಟೂರಿಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಪತ್ರಕರ್ತರು ಬರುವುದು ಬೇಡವೆಂದು ಜಿಲ್ಲಾಡಳಿತ ಹೊರಗಿಟ್ಟಿತ್ತು. ವಾರ್ತಾ ಇಲಾಖೆಯಿಂದ ಸುದ್ದಿ ಕೊಡುತ್ತೇವೆ, ಪತ್ರಕರ್ತರು ಬರುವುದು ಬೇಡ ಎಂದು ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ ಮತ್ತು ಎಸ್‌ಪಿ ರಮಣ್‌ಗುಪ್ತ ತೀರ್ಮಾನಿಸಿದ್ದರು.

ತ್ಯಾಗಟೂರಿಗೆ ತೆರಳಿದ್ದ ಪತ್ರಕರ್ತ­ರನ್ನು ಪೊಲೀಸರು ಒಳಗೆ ಬಿಡಲಿಲ್ಲ. ಆದರೆ ಜರ್ಮನಿ ಅಧ್ಯಕ್ಷರು ಇಲ್ಲಿನ ಜನರೊಂದಿಗೆ ಸಹಜವಾಗಿ ಬೆರೆತು ಮಾತನಾಡಿದರು. ಮುದ್ದಪುರದಲ್ಲಿ ಸಾಮಾನ್ಯ ಜನತೆ ಓಡಾಡುತ್ತಿದ್ದರೂ ಪತ್ರಿಕಾ ಛಾಯಾಗ್ರಹಕರನ್ನು ಪೊಲೀಸರು ತಡೆದು ಕಿರಿಕಿರಿ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.