ತುಮಕೂರು: ‘ಅಯ್ಯೊ ನೋಡಿ ಅಲ್ಲಿ ಆ ಮಕ್ಕಳು ಹೇಗೆ ಹಗ್ಗ ಹಿಡಿದು ತೇಲಾಡ್ತಾರೆ. ಇವರ ಮೈಯಲ್ಲಿ ಮೂಳೆಗಳು ಇವೆಯಾ? ಇವರೇನು ರಬ್ಬರ್ನಿಂದ ತಯಾರಿಸಿದ ಮಕ್ಕಳಾ!. ಬಳ್ಳಿಯಂತೆ ಹಗ್ಗಕ್ಕೆ, ಕಂಬಕ್ಕೆ ಸುತ್ತಿಕೊಳ್ಳುತ್ತಾರೆ.ಅತ್ತಿಂದಿತ್ತ ಇತ್ತಿಂದತ್ತ ನೆಗೆಯುತ್ತಾರೆ. ಅಬ್ಬಾ!’
ಸಭಾಂಗಣದಲ್ಲಿ ನೆರೆದ ಜನರು, ನೂರಾರು ಮಕ್ಕಳು ಹುಬ್ಬೇರಿಸಿದರು. ಕ್ಷಣ ಕ್ಷಣಕ್ಕೂ ಅಚ್ಚರಿ ವ್ಯಕ್ತಪಡಿಸಿದರು. ಮೈ ನವೀರೇಳಿಸುವ ಈ ಪ್ರದರ್ಶನ ಕಂಡು ಚಪ್ಪಾಳೆಯ ಸುರಿಮಳೆ ಗೈದರು.
ಇದು ಭಾನುವಾರ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ರಜತಯಾನ ಪ್ರಯುಕ್ತ ಆಯೋಜಿಸಿದ್ದ ಮಕ್ಕಳ ಸಮ್ಮೇಳನದ 2ನೇ ದಿನ ಹುಬ್ಬಳ್ಳಿ ಸಮೀಪದ ಶಿರಗುಪ್ಪಿಯ ಸ್ವಾಮಿ ವಿವೇಕಾನಂದ ಯೋಗ ಹಾಗೂ ಮಲ್ಲಕಂಬ ತರಬೇತಿ ಸಂಸ್ಥೆಯ ಮಕ್ಕಳು ಪ್ರದರ್ಶಿಸಿದ ಹಗ್ಗದ ಮಲ್ಲಕಂಬ, ಯೋಗಾಸನ ಮತ್ತು ರೋಪ್ ಸ್ಕಿಪ್ಪಿಂಗ್ ಪ್ರದರ್ಶನದಲ್ಲಿ ಕಂಡು ಬಂದ ನೋಟ.
ಮಕ್ಕಳ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದ ರಾಜ್ಯದ ವಿವಿಧ ಭಾಗಗಳ ನೂರಾರು ಮಕ್ಕಳು ಪ್ರದರ್ಶನ ಕಂಡು ಖುಷಿ ಪಟ್ಟರು. ಯೋಗಾಸನ ವಿಭಾಗದಲ್ಲಿ ಅರ್ಚನಾ ಕೆ. ನಟರಾಜಾಸಾನ, ಮಹಾಲಕ್ಷ್ಮಿ ಶಿವನಗೌಡರ, ರಾಧಿಕಾ ಅಳವಂಡಿ, ರಾಧಿಕಾ ಹೊಸಹಳ್ಳಿ, ಶಿವಲೀಲಾ ವಿರಕ್ತಮಠ, ರತ್ನಾ ಮೊರಬದ, ಜ್ಯೋಗಿ ಗುದ್ದಿನ, ಲಕ್ಷ್ಮಿ ತಹಶೀಲ್ದಾರ್, ಸಿಂಚನಾ, ಪೂಜಾ, ರಾಧಿಕಾ, ಜ್ಯೋತಿ, ಲಕ್ಷ್ಮಿ,ರತ್ನಾ ಸೇರಿ ವಿವಿಧ ಮಕ್ಕಳು ಪ್ರದರ್ಶನ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.