ತುಮಕೂರು: ಬೆಳಗಾವಿಯಲ್ಲಿ ಕನ್ನಡಿಗರೊಂದಿಗೆ ಸೌಹಾರ್ದದಿಂದ ಬಾಳುತ್ತಿರುವ ಮರಾಠಿ ಭಾಷಿಕರಲ್ಲಿ ಭಾಷಾ ಬೇಧದ ವಿಷಬೀಜ ಬಿತ್ತುವ ಮೂಲಕ ಬಾಳಾಠಾಕ್ರೆ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿಪ್ರಾಯಪಟ್ಟರು.
ಕರವೇ ಜಿಲ್ಲಾ ಘಟಕ ನಗರದಲ್ಲಿ ಈಚೆಗೆ ಆಯೋಜಿಸಿದ್ದ `ಕಲ್ಪತರು ನಾಡಿನಲ್ಲಿ ಸ್ವಾಭಿಮಾನಿ ಕನ್ನಡಿಗರ ಸಮಾವೇಶ~ ಉದ್ಘಾಟಿಸಿ ಅವರು ಮಾತನಾಡಿದರು.
ಕರವೇ ಕನ್ನಡಕ್ಕೆ ಕುತ್ತು ಬಂದಾಗ ಬೀದಿಗಿಳಿದು ಹೋರಾಡುವ ಏಕೈಕ ಸಂಘಟನೆ. ಕನ್ನಡ ಈ ರಾಜ್ಯದಲ್ಲಿ ಅನ್ನಕೊಡುವ ಭಾಷೆಯಾಗಬೇಕು. ಕನ್ನಡಕ್ಕೆ ಕಂಟಕ ಬಂದಾಗ ಎಲ್ಲ ಕನ್ನಡಿಗರೂ ಒಗ್ಗೂಡಿ ಪ್ರತಿಭಟಿಸಬೇಕು ಎಂದು ಪ್ರತಿಪಾದಿಸಿದರು.
ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಕುಡಿಯುವ ನೀರು ಮತ್ತು ನೀರಾವರಿ ಸಮಸ್ಯೆ ಪರಿಹಾರಕ್ಕೆ ಹೇಮಾವತಿ ಯೋಜನೆಯ ತ್ವರಿತ ಅನುಷ್ಠಾನ ಅತ್ಯಗತ್ಯ. ಈ ನಿಟ್ಟಿನಲ್ಲಿ ಕರವೇ ಹೋರಾಟ ರೂಪಿಸಬೇಕೆಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿತ್ರನಟಿ ತಾರಾ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. ಚಿತ್ರನಟರಾದ ಜಗ್ಗೇಶ್, ಪೂಜಾಗಾಂಧಿ, ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಜೆಡಿಎಸ್ ಮುಖಂಡರಾದ ಕೆ.ಬಿ.ಬೋರೇಗೌಡ, ಎಚ್.ನಿಂಗಪ್ಪ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಗೋವಿಂದರಾಜು, ಪಿ.ಗಂಗರಾಜು, ಲೋಕೇಶ್, ಪುಂಡಲೀಕ ಹಾಲಂಬಿ, ಜ್ಯೋತಿ ಗಣೇಶ್, ಅಂದಾನಪ್ಪ, ಗುರುರಾಜ ಹೊಸಕೋಟೆ, ಸಣ್ಣೀರಪ್ಪ, ತನುಜ್ಕುಮಾರ್, ಸ್ವಾಧೀನ್ಕುಮಾರ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.