ADVERTISEMENT

ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿ

ತಿಪಟೂರಿನಲ್ಲಿ ಬಿಜೆಪಿ ನವಶಕ್ತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 8:32 IST
Last Updated 17 ಮಾರ್ಚ್ 2018, 8:32 IST

ತಿಪಟೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಿವಾಳಿಯಾಗಿದೆ. ಹಣ ಕೊಟ್ಟವರಿಗೆ ಅಧಿಕಾರ ಎಂಬಂತಾಗಿದೆ ಎಂದು ಬಿಜೆಪಿ ಮುಖಂಡರಾದ ಜಿ.ಎಸ್. ಬಸವರಾಜ್ ಆರೋಪಿಸಿದರು. ನಗರದದಲ್ಲಿ ಶುಕ್ರವಾರ ನಡೆದ ಬಿಜೆಪಿ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಇಲ್ಲಿನ ಶಾಸಕ ಷಡಕ್ಷರಿ ಹಾಲ್ಕುರಿಕೆ ಭಾಗದ ಕೆರೆಗಳಿಗೆ ಕುಡಿಯುವನೀರಿನ ಉದ್ದೇಶಕ್ಕೆ ಮೀಸಲಿರಿಸಿದ್ದ ನೀರನ್ನು ಬೇರೆ ಭಾಗಕ್ಕೆ ತೆಗೆದುಕೊಂಡು
ಹೋಗಲಾಗಿದೆ. ಅವರಿಗೆ ಶಕ್ತಿ ಇದ್ದರೆ ಹೆಚ್ಚುವರಿ ನೀರನ್ನು ಮಂಜೂರು ಮಾಡಬೇಕಿತ್ತು ಎಂದು ಹೇಳಿದರು.

ಇಂತಹ ಧೋರಣೆಯುಳ್ಳವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು. ತಾಲ್ಲೂಕಿನ ಅಭಿವೃದ್ಧಿಗೆ ಕಂಕಣ ತೊಟ್ಟಿರುವ ನಾಗೇಶ್ ಅವರ ಗೆಲುವಿಗೆ ಎಲ್ಲರೂ ದುಡಿಯಬೇಕು ಎಂದು ಮನವಿ ಮಾಡಿದರು.

ADVERTISEMENT

ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಬದಲು  ಜಾತಿಗಳ ನಡುವೆ ಮತ್ತು ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಮಾಜಿ ಶಾಸಕ ಬಿ.ಸಿ ನಾಗೇಶ್ ಮಾತನಾಡಿ, ’ಕಾರ್ಯಕರ್ತರೇ ಬಿಜೆಪಿ ಶಕ್ತಿ. ಪಕ್ಷದ ಸಾಧನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸ ಬೇಕು. ಕಾರ್ಯಕರ್ತರು ಸದೃಢರಾದರೆ ಪಕ್ಷ ಶಕ್ತಿಯುತವಾಗುತ್ತದೆ. ಬೂತ್ ಮಟ್ಟದ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು. ಪಕ್ಷದ ಗೆಲುವು ಕಾರ್ಯಕರ್ತರ ಗೆಲುವು ಎಂದರು.

ರಾಜ್ಯ ಉಸ್ತುವಾರಿ ಅರುಣ್‍ಕುಮಾರ್, ಮಾಜಿ ಶಾಸಕ ಜೆ.ಸಿ ಮಾಧುಸ್ವಾಮಿ, ನಗರ ಘಟಕದ ಅಧ್ಯಕ್ಷ ಲೋಕೇಶ್, ನಗರಸಭಾ ಸದಸ್ಯ ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯಮ್ಮ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಬಿ. ದಿವಾಕರ್, ಶಂಕರಪ್ಪ, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.