
ತುಮಕೂರು: ಜಿಲ್ಲೆಗೆ ವರದಾನವಾಗಬೇಕಾಗಿದ್ದ ರಾಯದುರ್ಗ ಮತ್ತು ದಾವಣಗೆರೆ ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಯೋಜನೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಬಳಕೆ ಮಾಡಿಕೊಂಡು ರಾಯದುರ್ಗ ಕಡೆಯಿಂದ ಬಿರುಸಿನ ಕಾಮಗಾರಿ ನಡೆಸಲಾಗುತ್ತಿದೆ.
ತುಮಕೂರು– ರಾಯದುರ್ಗ ರೈಲ್ವೆ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ 50: 50 ಅನುದಾನದ ಅನುಪಾತದಲ್ಲಿ ಕೈಗೆತ್ತಿಕೊಂಡಿದ್ದು, ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರ ತಮ್ಮ ವ್ಯಾಪ್ತಿಯಲ್ಲಿ ಶೇ 50ರಷ್ಟು ವೆಚ್ಚ ಭರಿಸಲು ಒಪ್ಪಿಗೆ ಸೂಚಿಸಿವೆ.
ಮೂರು ವರ್ಷಗಳಲ್ಲಿ ಯೋಜನೆಗೆ ಕೇಂದ್ರ ಸರ್ಕಾರ ₨ 125 ಕೋಟಿ ಬಿಡುಗಡೆ ಮಾಡಿದೆ. ಅಲ್ಲದೆ ರಾಜ್ಯ ಸರ್ಕಾರ ₨ 40 ಕೋಟಿ ಹಣ ನೀಡಿದೆ. ಈ ಹಣವನ್ನು ಬಳಕೆ ಮಾಡಿಕೊಂಡು ರಾಯದುರ್ಗ ಕಡೆಯಿಂದ ಯೋಜನೆ ಕಾಮಗಾರಿ ಕೈಗೊಂಡಿದ್ದು, ತ್ವರಿತಗತಿಯಲ್ಲಿ ನಡೆಯುತ್ತಿದೆ.
ಯೋಜನೆಯ ಮೂಲ ರೂಪುರೇಷೆಯಂತೆ 2014–15ನೇ ಸಾಲಿನಲ್ಲಿ ತುಮಕೂರಿನಿಂದ ಮಧುಗಿರಿವರೆಗೆ ರೈಲ್ವೆ ಹಳಿ ಕಾಮಗಾರಿ ಮುಗಿಸಬೇಕಾಗಿತ್ತು. ಆದರೆ ಇನ್ನೂ ಪ್ರಾಥಮಿಕ ಹಂತದ ಕೆಲಸವೂ ತುಮಕೂರು ಕಡೆಯಿಂದ ಆರಂಭವಾಗಿಲ್ಲ. ಸದ್ಯಕ್ಕೆ ಕಾಮಗಾರಿ ಆರಂಭವಾಗುವ ಲಕ್ಷಣವೂ ಕಾಣುತ್ತಿಲ್ಲ.
ರಾಜ್ಯದಲ್ಲಿ ಇನ್ನೂ ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರ ಮಾಡಿಲ್ಲ. ಸರ್ಕಾರ ನಿಗದಿ ಮಾಡಿರುವ ಪರಿಹಾರಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಭೂಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹ. ಸರ್ಕಾರ ನಿಗದಿಪಡಿಸಿರುವ ಕಡಿಮೆ ಪರಿಹಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ರೈತರು ನಿರ್ಧರಿಸಿದ್ದಾರೆ. ಇದರಿಂದ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಕಳೆದ 2007– 08ರಲ್ಲಿ ಯೋಜನೆಗೆ ಅನುಮೋದನೆ ದೊರೆತಿದೆ. ಯೋಜನಾ ವೆಚ್ಚ ₨ 970 ಕೋಟಿಯಿಂದ ₨ 1196 ಕೋಟಿಗೆ ಹೆಚ್ಚಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ₨ 235 ಕೋಟಿ ಮತ್ತು ಆಂಧ್ರಪ್ರದೇಶ ಸರ್ಕಾರ ₨ 210 ಕೋಟಿ ನೀಡಲು ಒಪ್ಪಿಗೆ ನೀಡಿವೆ. ರಾಜ್ಯದಲ್ಲಿ 102.6 ಕಿ.ಮೀ ಮತ್ತು ಆಂಧ್ರಪ್ರದೇಶದಲ್ಲಿ 110.7 ಕಿ.ಮೀ. ರೈಲ್ವೆ ಹಳಿ ಹಾಕಬೇಕು. ಯೋಜನೆ ಅನುಷ್ಠಾನ ಗೊಂಡರೆ ತುಮಕೂರು, ಕೊರಟಗೆರೆ, ಮಧುಗಿರಿ ಭಾಗದ ಜನರಿಗೆ ಅನುಕೂಲವಾಗಲಿದೆ.
ಯೋಜನೆಗೆ ರಾಜ್ಯದಲ್ಲಿ 680 ಎಕರೆ ಭೂಮಿ ಅಗತ್ಯವಿದೆ. ಇದರಲ್ಲಿ ತುಮಕೂರು ಕಡೆಯಿಂದ 199 ಎಕರೆ ಭೂಮಿ ವಶಕ್ಕೆ ಸರ್ಕಾರ ಮುಂದಾಗಿದ್ದು, ಅಂತಿಮ ಹಂತದ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರ ನೀಡುತ್ತಿರುವ ಕಡಿಮೆ ಮೊತ್ತದ ಪರಿಹಾರ ವಿವಾದಕ್ಕೆ ಕಾರಣವಾಗಿದೆ. ಉಳಿದಂತೆ (67 ಎಕರೆಗೆ 6/1 ಮತ್ತು 163 ಎಕರೆ 4/1) ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ. 150 ಎಕರೆ ಭೂಮಿ ವಶಕ್ಕೆ ಗಡಿ ಗುರುತಿಸುವ ಕೆಲಸ ನಡೆಯುತ್ತಿದೆ.
ತುಮಕೂರು– ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿಯೂ ಆರಂಭವಾಗಿಲ್ಲ. ಯೋಜನೆಯನ್ನು 2010– 11ರಲ್ಲಿ ಮಂಜೂರು ಮಾಡಲಾಯಿತು. ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ. ತುಮಕೂರು, ಕೋರಾ, ವಸಂತನರಸಾಪುರವರೆಗೆ 140 ಎಕರೆ ಭೂಮಿ ವಶಕ್ಕೆ ಸರ್ಕಾರ ಮುಂದಾಗಿದೆ. ಆದರೆ ಇಲ್ಲಿಯೂ ಕಡಿಮೆ ಮೊತ್ತದ ಪರಿಹಾರ ನೀಡುತ್ತಿರುವುದೇ ವಿವಾದವಾಗಿದ್ದು, ರೈತರು ಕಡಿಮೆ ಪರಿಹಾರ ಪಡೆಯಲು ನಿರಾಕರಿಸಿದ್ದಾರೆ.
ತುಮಕೂರು– ಹಿರಿಯೂರು– ಚಿತ್ರದುರ್ಗ– ದಾವಣಗೆರೆ ಮಾರ್ಗಕ್ಕೆ ₨ 1196 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಇದರಲ್ಲಿ ₨ 485 ಕೋಟಿ ವೆಚ್ಚ ಭರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಅಲ್ಲದೆ ಅಗತ್ಯವಿರುವ 996 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ಸಂಪೂರ್ಣ ಉಚಿತವಾಗಿ ನೀಡಲು ಸರ್ಕಾರ ಸಮ್ಮತಿಸಿದೆ. ಆದರೆ ಇನ್ನೂ ಒಂದೇ ಒಂದು ಎಕರೆ ಭೂಮಿಯನ್ನು ಸಹ ವಶಕ್ಕೆ ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
₨ 43 ಕೋಟಿ ಪರಿಹಾರ
ತುಮಕೂರು: ರಾಯದುರ್ಗ ರೈಲ್ವೆ ಯೋಜನೆಗೆ ತುಮಕೂರು ಕಡೆಯಿಂದ 46 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕಾಗಿ ಸರ್ಕಾರ ₨ 43 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ರೈತರು ಪರಿಹಾರ ಪಡೆಯಲು ಮುಂದೆ ಬರುತ್ತಿಲ್ಲ ಎಂದು ರೈಲ್ವೆ ಭೂಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತುಮಕೂರು ನಗರದ ದಿಬ್ಬೂರು, ಅಮಾನಿಕೆರೆ, ವೀರಸಾಗರ, ಹೊನ್ನೇನಹಳ್ಳಿ ಪ್ರದೇಶದಲ್ಲಿ ವಶಕ್ಕೆ ಪಡೆದಿರುವ ಭೂಮಿಗೆ ಪರಿಹಾರದ ಹಣ ನೀಡಬೇಕಾಗಿದೆ. ಆದರೆ ಪರಿಹಾರ ಅತ್ಯಂತ ಕಡಿಮೆಯಾಗಿದ್ದು, ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂದು ರೈತರು ಮನವಿ ಸಲ್ಲಿಸಿದ್ದಾರೆ. ಈ ಸಮಸ್ಯೆ ಇತ್ಯರ್ಥವಾಗಬೇಕಿದೆ. ಉಳಿಕೆ ಭೂಮಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಭೂ ಕಾಯ್ದೆಯಂತೆ ವಶಕ್ಕೆ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಲಾಗುವುದು. ತುಮಕೂರು– ದಾವಣಗೆರೆ ಯೋಜನೆಗೆ ಸರ್ವೆ ನಡೆದಿದೆ. ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.