ತುಮಕೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಾಂಬ್ ಸ್ಫೋಟದ ಬಂಧಿತ ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಶನಿವಾರ ಸಂಜೆ ನಗರಕ್ಕೆ ಕರೆತಂದು ವಿಚಾರಣೆ ನಡೆಸಿದರು. ಆದರೆ ಉಗ್ರರನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಿದ ವಿಚಾರ ಇಲ್ಲಿನ ಪೊಲೀಸರಿಗೂ ತಿಳಿಸದೆ ಗೌಪ್ಯವಾಗಿಡಲಾಗಿತ್ತು.
ವಿಚಾರಣೆಗಾಗಿ ನಾಲ್ವರು ಉಗ್ರರನ್ನು ಪೊಲೀಸ್ ವಾಹನದಲ್ಲಿ ಕರೆ ತರಲಾಗಿತ್ತು. ತನಿಖಾ ತಂಡ ವಿವರ ನೀಡಲಿಲ್ಲ.ನಗರದ ಹೊರವಲಯದ ತುಮಕೂರು- ಕ್ಯಾತ್ಸಂದ್ರ ರಿಂಗ್ ರಸ್ತೆಯ ರಾಣಿ ಚೆನ್ನಮ್ಮ ಸರ್ಕಲ್ ಬಳಿ ಕರೆತರಲಾಗಿತ್ತು. ಸರ್ಕಲ್ ಬಳಿ ಇರುವ ಮದರಸಕ್ಕೆ ಅಂಟಿಕೊಂಡಂತೆ ಇರುವ ಮನೆಯನ್ನು ತೋರಿಸಿದ ಉಗ್ರರು ಇದೇ ಮನೆಯಲ್ಲಿ ಬಾಂಬ್ ತಯಾರಿಸಿದ್ದಾಗಿ ಹೇಳಿದರು.
ಬಾಂಬ್ ತಯಾರಿಸಿದ ನಂತರ ಉಳಿದಿದ್ದ ಲೋಹ ಮತ್ತಿತರ ತ್ಯಾಜ್ಯವನ್ನು ಮದರಸ ಎದುರಿಗೆ ಹಾದು ಹೋಗಿರುವ ಹೈಟೆನ್ಷನ್ ಲೈನ್ ಕೆಳಗೆ ಹೂತ್ತಿಟ್ಟಿದ್ದರು. ಹೂತಿಟ್ಟಿದ್ದ ತ್ಯಾಜ್ಯವನ್ನು ಉಗ್ರರು ಗುರುತಿಸಿ ತೆಗೆದುಕೊಟ್ಟರು. ತನಿಖಾ ತಂಡ ತ್ಯಾಜ್ಯವನ್ನು ಬಾಕ್ಸ್ನಲ್ಲಿ ಸಂಗ್ರಹಿಸಿಕೊಂಡಿತು.
ಮದರಸ ಬಳಿ ಉಗ್ರರು ಇದ್ದ ಮನೆಯೊಳಗೆ ತೆರಳಿ ತನಿಖಾ ತಂಡ ಪರಿಶೀಲನೆ ನಡೆಸಿತು. ಈ ಮನೆ ಸದಾಶಿವ ನಗರದ ನಿವಾಸಿಯೊಬ್ಬರಿಗೆ ಸೇರಿದ್ದು ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದ ತನಿಖಾ ತಂಡ ಕೆಲವು ಮಾಹಿತಿ ಪಡೆದು ತೆರಳಿತು.
ಉಗ್ರರನ್ನು ನಗರಕ್ಕೆ ಕರೆ ತಂದಿರುವ ವಿಚಾರ ಗೊತ್ತಿಲ್ಲ. ಈ ಸಂಬಂಧ ಜಿಲ್ಲಾ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ತನಿಖೆಯ ಯಾವುದೇ ವಿಷಯ ಹಂಚಿಕೊಂಡಿಲ್ಲ ಎಂದು ಜಿಲ್ಲಾ ಪೊಲೀಸ್ ಪ್ರಭಾರಿ ವರಿಷ್ಠಾಧಿಕಾರಿ ಲಾಬೂ ರಾಂ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.