ADVERTISEMENT

ವಿಲೇವಾರಿಯಾಗದ ಮಳಿಗೆಗಳು: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 5:56 IST
Last Updated 20 ಡಿಸೆಂಬರ್ 2017, 5:56 IST
ಕುಣಿಗಲ್ ಸಂತೆ ಮೈದಾನದಲ್ಲಿ 1999 ರಲ್ಲಿ ನಿರ್ಮಾಣಗೊಂಡ ಮಳಿಗೆಗಳು
ಕುಣಿಗಲ್ ಸಂತೆ ಮೈದಾನದಲ್ಲಿ 1999 ರಲ್ಲಿ ನಿರ್ಮಾಣಗೊಂಡ ಮಳಿಗೆಗಳು   

ಕುಣಿಗಲ್: ಪಟ್ಟಣದ ಸಂತೆ ಮೈದಾನದಲ್ಲಿ 1999-2000 ಸಾಲಿನಲ್ಲಿ ನಿರ್ಮಾಣಗೊಂಡ 100 ಮಳಿಗೆಗಳು, ಜನಪ್ರತಿನಿಧಿ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮರ್ಪಕವಾಗಿ ವಿಲೇವಾರಿಯಾಗದೆ ಪುರಸಭೆ ವಶಕ್ಕೆ ಪಡೆದು 7ತಿಂಗಳಾದರೂ ವಿಲೇವಾರಿಗೆ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ಬಗ್ಗೆ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂತೆ ಮೈದಾನದಲ್ಲಿ 10ನೇ ಹಣಕಾಸು ಯೋಜನೆಯಡಿ 25 ಆರ್‌ಸಿಸಿ ಮತ್ತು 75 ಸಿಮೆಂಟ್ ಶೀಟ್‌ಗಳ ಮಳಿಗೆಗಳನ್ನು ನಿರ್ಮಿಸಲಾಯಿತು. ಎರಡು ಬಾರಿ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಹರಾಜು ಪ್ರಕ್ರಿಯೆಗಳು ನಡೆದು ಅಂಗಡಿಗಳನ್ನು ವಿಲೇವಾರಿ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಅಧಿಕಾರಿಗಳು ಮುಂಗಡ ಹಣಪಡೆದು ಅಧಿಕೃತ ದಾಖಲೆಗಳನ್ನು ಸಿದ್ಧಪಡಿಸಲು ವಿಫಲರಾದರೆ, ಮಳಿಗೆ ಪಡೆದವರೂ ಅಂಗಡಿಗಳನ್ನು ವಶಕ್ಕೆ ಪಡೆಯದೆ, ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಪಟ್ಟುಹಿಡಿದರು. ಕಾರಣ ಹಲವಾರು ವರ್ಷಗಳು ವಿವಾದ ಉಂಟಾಯಿತು ೆಂದು ಬಿಜೆಪಿ ಮುಖಂಡ ಕೆ.ಕೆ.ರಮೇಶ್‌ ಹೇಳಿದರು.

ಈ ನಡುವೆ ಮಳಿಗೆ ಪಡೆದಿರುವುದಾಗಿ ಹೇಳಿ ಕೆಲ ವರ್ತಕರು ವ್ಯಾಪಾರ ಪ್ರಾರಂಭಿಸಿದರು. ಮತ್ತೆ ಕೆಲ ಪ್ರಭಾವಿಗಳು ಪುರಸಭೆ ಅಧಿಕಾರಿಗಳ ಗಮನಕ್ಕೆ ತಾರದೆ ಅಕ್ರಮವಾಗಿ ಮಳಿಗೆಗಳನ್ನು ಬಾಡಿಗೆ ನೀಡಿ ವಸೂಲಾತಿಗೆ ಇಳಿದರು. ಮಳಿಗೆ ನಿರ್ಮಿಸಿ 17 ವರ್ಷವಾದರೂ ಸಮರ್ಪಕವಾಗಿ ನಿಯಮಾವಳಿ ಪ್ರಕಾರ ವಿಲೇವಾರಿ ಮಾಡದ ಅಧಿಕಾರಿಗಳ ಕ್ರಮವನ್ನು ಪುರಸಭೆ ಸದಸ್ಯ ಸತೀಶ್ ಆಕ್ಷೇಪ ವ್ಯಕ್ತಪಡಿಸಿದಾಗ ಮುಖ್ಯಾಧಿಕಾರಿ ಪಂಕಜಾವಿಧಿ ಇಲ್ಲದೆ ಮಳಿಗೆಗಳನ್ನು ಮೇ ತಿಂಗಳಲ್ಲಿ ಪುರಸಭೆ ವಶಕ್ಕೆ ಪಡೆದರು. ವಶಕ್ಕೆ ಪಡೆಯುವ ಮುನ್ನ ಮಳಿಗೆ ವ್ಯಾಪ್ತಿಯ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದ್ದರು. ಅದರಂತೆ ಶೌಚಾಲಯ ನಿರ್ಮಾಣವಾಗುತ್ತಿದೆ.

ADVERTISEMENT

ಹೈಮಾಸ್ಟ್‌ ದೀಪದ ವ್ಯವಸ್ಥೆಯಾಗಿದೆ. ಆದರೆ, ಮಳಿಗೆಗಳ ದುರಸ್ತಿಯಾಗಿಲ್ಲ. ವಿದ್ಯುತ್ ದೀಪದ ವ್ಯವಸ್ಥೆ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಕಾಣದ ಕೈಗಳ ಕೈವಾಡದಿಂದ ಮಳಿಗೆ ದುರಸ್ತಿ ಹಾಗೂ ವಿಲೇವಾರಿ ವಿಳಂಬವಾಗುತ್ತಿದೆ ಎಂದು ಸದಸ್ಯ ಸತೀಶ್ ಆರೋಪಿಸಿದರು.

ಸಾರ್ವಜನಿಕರ ತೆರಿಗೆ ಹಣದ ಯೋಜನೆಗಳು ಸದುಪಯೋಗವಾಗುತ್ತಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಳಿಗೆ ನಿರ್ಮಿಸಿ 17 ವರ್ಷವಾದರೂ ಜನಪ್ರತಿನಿಧಿ ಮತ್ತು ಅಧಿಕಾರಿಗಳ ಲೋಪದಿಂದಾಗಿ ಈಗಾಗಲೇ ಮುಂಗಡ ಪಾವತಿಸಿದ್ದವರೂ ಹಣ ಕಳೆದುಕೊಂಡಿದ್ದಾರೆ. ಇನ್ನಾದರೂ ಜಿಲ್ಲಾಧಿಕಾರಿ ಗಮನ ಹರಿಸಿ ಮಳಿಗೆಗಳ ದುರಸ್ತಿ ಮಾಡಿ, ಪಾರದರ್ಶಕ ನೀತಿ ಅಳವಡಿಸಿ ಅರ್ಹರಿಗೆ ಮಳಿಗೆಗಳನ್ನು ನೀಡಿ ರಸ್ತೆ ಬದಿ ವ್ಯಾಪಾರಿಗಳಿಗೆ ನೀಡಿ ಅವರು ಆರ್ಥಿಕ ಸ್ಥಿತಿ ಸುಧಾರಣೆಗೆ ಅವಕಾಶ ನೀಡಬೇಕು ಎಂದು ಚಿಗುರು ಫೌಂಡೇಷನ್ ಅಧ್ಯಕ್ಷ ಪುರುಷೋತ್ತಮ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.