ADVERTISEMENT

ಶಾಸಕರ ಸಮ್ಮತಿ ಪಡೆದೇ ಆಯ್ಕೆ: ಎ.ಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 6:04 IST
Last Updated 18 ಮಾರ್ಚ್ 2014, 6:04 IST

ತುಮಕೂರು: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡರು ಮಾತ್ರವಲ್ಲ ಜಿಲ್ಲೆಯ ಜೆಡಿಎಸ್‌ನ ಎಲ್ಲ ಶಾಸಕರು ಒಮ್ಮತದಿಂದ  ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿ­ದ್ದಾರೆ. ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ ಇಲ್ಲಿ ಸೋಮವಾರ ಪತ್ರಿಕಾ­ಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯ ಅಭ್ಯರ್ಥಿ, ಹೊರಗಿನವರು ಎಂಬ ಪ್ರಶ್ನೆ ಬರುವುದಿಲ್ಲ. ಪಕ್ಷದ ಯಾವುದೇ ಶಾಸಕರ ವಿರೋಧ ಇಲ್ಲ. ಎಲ್ಲ ಶಾಸಕರ ಸಮ್ಮುಖದಲ್ಲೇ ದೇವೇ­ಗೌಡರು ಆಯ್ಕೆ ಮಾಡಿದರು. ಅಭ್ಯರ್ಥಿ ಬದಲಾಗುವ ಪ್ರಶ್ನೆಯೇ ಇಲ್ಲ. ನಾನೇ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.

ಕ್ಷೇತ್ರದ ಸಮಸ್ಯೆಗಳ ಅರಿವಿದೆ. ನಾಲ್ಕು ಸಲ ಶಾಸಕನಾಗಿ, ಎರಡು ಸಲ ಸಚಿವನಾಗಿ ಆಡಳಿತ ಮತ್ತು ರಾಜ­ಕೀಯದ ಅನುಭವವಿದೆ.
ಇಲ್ಲಿಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿ­ಸುವೆ. ಜಿಲ್ಲೆಯಲ್ಲಿ ಅನೇಕ ಗೆಳೆಯರಿದ್ದು ಕ್ಷೇತ್ರದ ಸಂಪೂರ್ಣ ಅರಿವಿದೆ ಎಂದು ಹೇಳಿದರು.

೧೩ ಪಂಚವಾರ್ಷಿಕ ಯೋಜನೆ­ಗಳು ಕಳೆದರೂ ದೇಶ ಇನ್ನೂ ಬಡತನದಲ್ಲೇ ನಲುಗುತ್ತಿದೆ. ಶಿಕ್ಷಣ, ಆರೋಗ್ಯ ವ್ಯವಸ್ಥೆ ಸುಧಾರಿಸಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ತೆಂಗು ಮತ್ತು ಅಡಿಕೆ ಒಣಗು ಹೋಗುತ್ತಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿದರೆ ಸಮಸ್ಯೆಗಳ ವಿರುದ್ಧ  ದೇವೇ­ಗೌಡರು ಹೋರಾಟ ಮಾಡುತ್ತಾರೆ ಎಂದರು.

ಕಾಂಗ್ರೆಸ್‌ನ ಭ್ರಷ್ಟಾಚಾರ, ಬಿಜೆಪಿಯ ಆಡಳಿತ ವೈಫಲ್ಯ, ಎಚ್‌.ಡಿ.­ದೇವೇ­ಗೌಡರು, ಎಚ್‌.ಡಿ.ಕುಮಾರಸ್ವಾಮಿ ಆಡಳಿತ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಾಗಿ ತಿಳಿಸಿ­ದರು.

ಎರಡು–ಮೂರು ದಿನಗಳಲ್ಲಿ ಪಕ್ಷದ ಎಲ್ಲ ಶಾಸಕರು, ಮುಖಂಡರು ತಮ್ಮ ಪರವಾಗಿ ಚುನಾವಣಾ ಅಖಾಡಕ್ಕೆ ಇಳಿ­ಯ­ಲಿದ್ದಾರೆ. ಮಾರ್ಚ್ 19ರಂದು ನಾಮಪತ್ರ ಸಲ್ಲಿಸುವುದಾಗಿ ಪ್ರಶ್ನೆ­ಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ತಿಮ್ಮ­ರಾಯಪ್ಪ, ಪಕ್ಷದ ಸಂಸದೀಯ ಮಂಡಳಿ ಸದಸ್ಯ ಎಚ್‌.ಸಿ. ನೀರಾವರಿ, ಮಾಜಿ ಸಚಿವ ಬಿ.ಸತ್ಯನಾರಾಯಣ್‌,  ಚಿತ್ರ ದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೂಳಿಹಟ್ಟಿ ಶೇಖರ್‌,  ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್‌.ಹುಲಿನಾಯ್ಕರ್‌, ಹಿರಿಯ ಮುಖಂಡರಾದ ಡಾ.ಅನ್ನ­ದಾನಿ, ವೀರಭದ್ರಯ್ಯ, ಯುವ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬೆಳ್ಳಿಲೋಕೇಶ್‌  ಇನ್ನಿತರರು ಇದ್ದರು.

ಸಭೆ: ಶಾಸಕರಾದ ಎಸ್‌.ಆರ್‌.­ಶ್ರೀನಿವಾಸ್‌, ಸುರೇಶ್‌ಬಾಬು, ಎಂ.ಟಿ.­ಕೃಷ್ಣಪ್ಪ ಹಾಗೂ ತಿಮ್ಮರಾಯಪ್ಪ ಅವರೊಂದಿಗೆ ಚುನಾವಣೆ ಕುರಿತು ಎ. ಕೃಷ್ಣಪ್ಪ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.