ADVERTISEMENT

ಶಿರಾ: ಕಾಂಗ್ರೆಸ್ – ಜೆಡಿಎಸ್ ಸಮಬಲ ಹೋರಾಟ

ಶಿರಾ; ಹಾಲಿ, ಮಾಜಿಗಳಿಗೆ ತಲೆ ನೋವಾದ ಪಕ್ಷೇತರರು

ರಾಮರಡ್ಡಿ ಅಳವಂಡಿ
Published 9 ಮೇ 2018, 11:37 IST
Last Updated 9 ಮೇ 2018, 11:37 IST
ಶಿರಾ: ಕಾಂಗ್ರೆಸ್ – ಜೆಡಿಎಸ್ ಸಮಬಲ ಹೋರಾಟ
ಶಿರಾ: ಕಾಂಗ್ರೆಸ್ – ಜೆಡಿಎಸ್ ಸಮಬಲ ಹೋರಾಟ   

ತುಮಕೂರು: ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ನೇರ ಹಣಾಹಣಿ. 7ನೇ ಬಾರಿ ವಿಧಾನ ಸಭೆ ಪ್ರವೇಶಿಸುವ ಉಮೇದಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರು ಈ ಬಾರಿ ಶಿರಾ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಿದ್ದಾರೆ.

ಕ್ಷೇತ್ರಕ್ಕೆ ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಇವರಿಗೆ ಅಸ್ತ್ರವಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್‌ ನಿಂತು  ಸ್ಪರ್ಧಿಸಿ ಸೋಲುಂಡು ಮಾಜಿ ಸಚಿವ ಬಿ.ಸತ್ಯನಾರಾಯಣ ಅವರು ಜೆಡಿಎಸ್ ಮೂಲ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ, ಮತದಾರರ ಅನುಕಂಪವು ಇವರಿಗೆ ವರವಾಗುವ ಸಾಧ್ಯತೆ ಇದೆ.

ಜಯಚಂದ್ರ ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿರುವ ಬಗ್ಗೆ ಮತದಾರರಿಗೆ ಜಯಚಂದ್ರ ಹೇಳುತ್ತಿದ್ದಾರೆ.

ADVERTISEMENT

ಎತ್ತಿನಹೊಳೆ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಕೈಗಾರಿಕೆಗಳನ್ನು ಜಿಲ್ಲೆಗೆ ತಂದಿರುವುದು, ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಬ್ಯಾರೇಜ್ ನಿರ್ಮಾಣ ಮಾಡಿರುವುದು, ನಿವೇಶನ ಹಂಚಿಕೆ ಮದಲೂರು ಕೆರೆಗೆ ಹೇಮಾವತಿ ನಾಲಾದಿಂದ ನೀರು ಹರಿಸಿದ್ದು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದು, ಮತ್ತೊಂದು ಬಾರಿ ಆಯ್ಕೆ ಮಾಡಲು ಮತದಾರರಿಗೆ ಕ್ಷೇತ್ರದಲ್ಲಿ ಮನವಿ ಮಾಡುತ್ತಿದ್ದಾರೆ.

ಜಯಚಂದ್ರ ಅಭಿವೃದ್ಧಿ ಕೆಲಸ ಮಾಡಿದ್ದರೂ ಜನಸಾಮಾನ್ಯರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂಬ ಆರೋಪವೂ ಇದೆ.
ಸತತ ಎರಡು ಬಾರಿ ಪರಾಭವಗೊಂಡ ಬಿ.ಸತ್ಯನಾರಾಯಣ ಅವರಿಗೆ ಮತದಾರ ಅನುಕಂಪ ತೋರುವ ಲಕ್ಷಣಗಳಿವೆ. ಹಣ ಬಲ ಮೊದಲಿನಷ್ಟು ಇಲ್ಲ. ಆದರೆ, ಉಸ್ತುವಾರಿ ಸಚಿವರಿಗೆ ಹೋಲಿಸಿದರೆ ಜನಬಲ ಹೆಚ್ಚಾಗಿದೆ. ಪಕ್ಷದಲ್ಲಿನ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಅತೃಪ್ತರಾಗಿ ದ್ದಾರೆ. ಅವರ ಕಿರಿಕಿರಿಯೇ ಸತ್ಯಣ್ಣ ಅವರಿಗೆ ತಲೆನೋವಾಗಿದೆ (ಸತ್ಯನಾರಾಯಣ) ಎಂದು ಪಕ್ಷದ ಕಾರ್ಯಕರ್ತರೊಬ್ಬರು ಹೇಳುತ್ತಾರೆ.

ಜೆಡಿಎಸ್ ಟಿಕೆಟ್ ಆಕಾಂಕ್ಷಿ ಚಿದಾನಂದ್ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇದು ಸತ್ಯನಾರಾಯಣ ಅವರಿಗೆ ಬಿಸಿ ತುಪ್ಪವಾಗಿದೆ.

ಬಿಜೆಪಿಯಿಂದ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಬಿಜೆಪಿ ಉಮೇದುವಾರರಾಗಿದ್ದಾರೆ.ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗೊಲ್ಲ ಸಮುದಾಯದ ಸಿ.ಎಂ.ನಾಗರಾಜು ಸಹ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿರುವ ಗೊಲ್ಲ ಸಮುದಾಯದ ಮತಗಳು ಒಟ್ಟುಗೂಡಿದರೆ ಗೆಲುವು ತಮ್ಮದೇ ಎಂಬ ಆತ್ಮವಿಶ್ವಾಸ ಅವರದ್ದು.

ಇವರ ಸ್ಪರ್ಧೆ ಬಿಸಿ ಜಯಚಂದ್ರ ಅವರಿಗೂ ತಟ್ಟಲಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಗೊಲ್ಲ ಸಮುದಾಯದ ಸತೀಶ್ ಸಾಸಲು ಅವರಿಗೆ ಟಿಕೆಟ್ ಕೈ ತಪ್ಪಿಸಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಆರೋಪ ಜಯಚಂದ್ರ ಅವರ ಬಗ್ಗೆ ಇದೆ. ಹೀಗಾಗಿ, ಆ ಸಮುದಾಯದ ಮತಗಳು ನಾಗರಾಜುಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹಿಂದುಳಿದ ಸಮುದಾಯಗಳ ಮತ ನೆಚ್ಚಿ ಗೆಲುವು ಸಾಧಿಸಿಸುತ್ತಿದ್ದ ಜಯಚಂದ್ರ ಅವರಿಗೆ ಆ ಮತಗಳನ್ನು ಕಾಯ್ದುಕೊಳ್ಳಲು ಸಾಹಸ ಇದೆ.

ಯುವಕರಿಗೆ ಉದ್ಯೋಗ ಕಲ್ಪಿಸಲಿ

‘ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ಯುವಕರನ್ನು ಬಳಸಿಕೊಳ್ಳುತ್ತಾರೆ. ಇಲ್ಲ ಸಲ್ಲದ ಆಶ್ವಾಸನೆ ನೀಡುತ್ತಾರೆ. ಆಯ್ಕೆಯಾದ ಬಳಿಕ ಕ್ಷೇತ್ರ ಕಡೆಗಣಿಸುತ್ತಾರೆ’ ಎಂದು ವಿದ್ಯಾರ್ಥಿ ಕಾಂತರಾಜು ಹೇಳಿದರು.

‘ಯುವಕರಿಗೆ ಉದ್ಯೊಗ ಸೃಷ್ಟಿಸುವ ಕೆಲಸ ಯಾರೂ ಮಾಡುತ್ತಿಲ್ಲ. ಸಣ್ಣ ಕೆಲಸಕ್ಕೂ ನಗರ ಪ್ರದೇಶಕ್ಕೆ ವಲಸೆ ಹೋಗಬೇಕಾಗಿದೆ. ಇಂತಹ ವಿಚಾರಗಳ ಬಗ್ಗೆ ಯಾವುದೇ ಪಕ್ಷ ಮಾತನಾಡುವುದಿಲ್ಲ. ಯುವಕರಿಗೆ ಉದ್ಯೋಗ ಕಲ್ಪಿಸಿ ಅನುಕೂಲ ಮಾಡಿಕೊಡುವವರು ಬರಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.