ADVERTISEMENT

ಸಾಂಸ್ಕೃತಿಕ ಜಾತ್ರೆಯಂತೆ ನಡೆದ ಶಿವೋತ್ಸವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 9:42 IST
Last Updated 4 ಮಾರ್ಚ್ 2014, 9:42 IST

ಶಿರಾ: ತಾಲ್ಲೂಕಿನ ಜನಪದ ದೈವ ಜುಂಜಪ್ಪನ ಮೂಲ ನೆಲೆ ಜುಂಜಪ್ಪನ ಗುಡ್ಡೆಯಲ್ಲಿ ಸಿರಾಸೀಮೆ ವೇದಿಕೆ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶಿವೋತ್ಸವ ಸಾಂಸ್ಕೃತಿಕ ಜಾತ್ರೆಯಂತೆ ನೆರವೇರಿತು.

ಶಾಮಿಯಾನ ಕುರ್ಚಿ ರಹಿತವಾಗಿ ಚಿತ್ರಕಲಾವಿದ ರಾಘವೇಂದ್ರ ನಾಯ್ಕ ವಿನ್ಯಾಸಗೊಳಿಸಿದ ಕಲ್ಲಿನ ಕುರ್ಚಿಯ ಸರಳ ವೇದಿಕೆಯಲ್ಲಿ ಆಹೋರಾತ್ರಿ ಸಾಂಸ್ಕೃತಿಕ ಜಾಗರಣೆ ನಡೆಯಿತು.

ಜುಂಜಪ್ಪನ ಕಥನ ಗಾಯನ, ಕವಿಗೋಷ್ಠಿ, ತತ್ವಪದ, ಭಜನಮೇಳದಿಂದ ಕೂಡಿದ್ದ ಇಡೀ ರಾತ್ರಿಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ದೂರದ ಊರಿನಿಂದ ಆಗಮಿಸಿದ್ದ ನೂರಾರು ಜನ ಸಾಕ್ಷಿಯಾದರು.

ಪ್ರೆಸಿಡೆನ್ಸಿ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಚಿದಾನಂದ್ ಅಧ್ಯಕ್ಷತೆಯಲ್ಲಿ ಶಿರಾ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಚ್.ಮಹೇಂದ್ರಪ್ಪ ಶಿವನ ಕುರಿತು ಉಪನ್ಯಾಸ ನೀಡಿದರು.

ಜನಪದ ವಿದ್ವಾಂಸ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಜುಂಜಪ್ಪನ ಬಗ್ಗೆ ಮಾತನಾಡಿದರು. ಸಾಂಸ್ಕೃತಿಕ ಸಂಘಟಕ ಅಂಕಸಂದ್ರ ಪ್ರೇಮಕುಮಾರ್ ಗುರುಪುತ್ರರಿಗೆ ಶಿವವಸ್ತ್ರ ವಿಭೂತಿ ವಿತರಿಸಿದರು.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಉಗಮ ಶ್ರೀನಿವಾಸ್ ಅವರಿಗೆ ಸಾಂಕೇತಿಕವಾಗಿ ಗಣೆ ನೀಡುವ ಮೂಲಕ ಗೌರವಿಸಲಾಯಿತು. ಸಾಹಿತಿಗಳಾದ ಕೃಷ್ಣಮೂರ್ತಿ ಬಿಳಿಗೆರೆ, ನಟರಾಜ ಬೂದಾಳ್, ಇತಿಹಾಸ ಸಂಶೋಧಕ ಡಾ.ನಂದೀಶ್ವರ್ ಆಗಮಿಸಿದ್ದರು.

ಜುಂಜಪ್ಪನ ಕಥನ ಗಾಯನದಲ್ಲಿ ಜನಪದ ಕಲಾವಿದ ಕೆ.ರಂಗನಹಳ್ಳಿ ಜುಂಜಣ್ಣ, ಗಣೆ ವಾದಕ ದೊಡ್ಡಟ್ಟಿ ಕರಿಯಣ್ಣ ಪಾಲ್ಗೊಂಡಿದ್ದರು. ಗಣೆಯ ನಿನಾದ ರಾತ್ರಿ ವಾತಾವರಣದಲ್ಲಿ ಅನುರಣಿಸುತ್ತಾ ಇಡೀ ರಾತ್ರಿಗೆ ಅಲೌಕಿಕ ಶೋಭೆ ತುಂಬಿದಂತಿತ್ತು.

ನಂತರ ನಡೆದ ಕವಿಗೋಷ್ಠಿಯನ್ನು ಚಲನಚಿತ್ರ ನಟ, ಕವಿ ಎಂ.ಎಸ್.ಜಹಾಂಗೀರ್ ಉದ್ಘಾಟಿಸಿದರು. ಕೆ.ಕರಿಸ್ವಾಮಿ, ಆಲೂರು ದೊಡ್ಡನಿಂಗಪ್ಪ, ಹಳ್ಳಿ ಸುರೇಶ್, ಫಿನೀಕ್ಸ್ ರವಿ, ಸುಜಾತಾ ಕುಮಟ, ಸತೀಶ್ ತಿಪಟೂರು, ವಾಣಿ ಸತೀಶ್, ಸುರೇಶ್ ವತ್ಸ, ತಾ.ಸ.ಪುಷ್ಪಾ, ಧನಂಜಯ, ರಾಧಕೃಷ್ಣ ಕವಿತೆ ವಾಚಿಸಿದರು.

ತಿಪಟೂರು ಕೃಷ್ಣ, ಉಜ್ಜಜ್ಜಿ ರಾಜಣ್ಣ, ಜಗದೀಶ್ ಸೀತಕಲ್, ಶಿರಾಗೇಟ್ ರಾಮಣ್ಣ ಇದ್ದರು. ತದನಂತರ ನಡೆದ ತತ್ವಪದ-- ಹಾಗೂ ಭಜನ ಮೇಳದಲ್ಲಿ ಕಣುಮಣ್ಣ ಹಾಗೂ ಕುಂಬಾರಹಳ್ಳಿ ಬೋರೇಗೌಡರು ನೇತೃತ್ವದ ತಂಡ ಪಾಲ್ಗೊಂಡು ಮುಂಜಾನೆ 7ರವರೆಗೂ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.