ತುಮಕೂರು: ಸಿದ್ದಗಂಗಾ ಜಾತ್ರೆ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಆಯೋಜಿಸಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಇದು 48ನೇ ವರ್ಷದ ವಸ್ತು ಪ್ರದರ್ಶನ ವಾಗಿದ್ದು, ಹದಿನೈದು ದಿನಗಳ ಕಾಲ ಪ್ರದರ್ಶನ ಇರುತ್ತದೆ. ವಸ್ತು ಪ್ರದರ್ಶನದ ಜೊತೆಗೆ ಪ್ರತಿ ದಿನ ಸಂಜೆ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ವಸ್ತು ಪ್ರದರ್ಶನಕ್ಕೆ ರಾಜ್ಯ ಸರ್ಕಾರದಿಂದ ರೂ. 10 ಲಕ್ಷ ನೆರವು ನೀಡಲಾಗಿದೆ.
ವಸ್ತು ಪ್ರದರ್ಶನ ಕಣ್ಮನ ಸೆಳೆಯುತ್ತಿದ್ದು, ಕೇಂದ್ರ ಸರ್ಕಾರದ 6 ಮಳಿಗೆ, ರಾಜ್ಯ ಸರ್ಕಾರದ 26 ಮಳಿಗೆ ಸೇರಿದಂತೆ ಒಟ್ಟು 192 ಮಳಿಗೆ ಇವೆ. ಕಲಾ ವೈಭವ ಕಾರ್ಯಕ್ರಮದಡಿ ಜಿಲ್ಲೆಯ ಸ್ವ ಸಹಾಯ ಸಂಘಗಳು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ವಿಶೇಷವಾಗಿದೆ.
ವಿವಿಧ ಇಲಾಖೆಗಳು ತೆರೆದಿರುವ ಮಳಿಗೆಗಳು ಜಿಲ್ಲೆಯ ಅಭಿವೃದ್ಧಿಯ ಕಣ್ಣೋಟ ನೀಡುವಲ್ಲಿ ಸಫಲವಾಗಿವೆ. ಕೇವಲ ಕೈಗಾರಿಕೆ, ಕೃಷಿ ಮಾತ್ರ ವಲ್ಲದೆ ಆರೋಗ್ಯ, ಸ್ವಚ್ಛತೆ ಕಾರ್ಯಕ್ರಮಗಳಿಗೂ ಮನ್ನಣೆ ನೀಡಲಾಗಿದೆ. ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ ಇಲಾಖೆ ಮಳಿಗೆಗಳು ಈ ಕ್ಷೇತ್ರಗಳಲ್ಲಿ ಜನರನ್ನು ಜಾಗೃತರನ್ನಾಗಿ ಮಾಡುವ ಪ್ರಯತ್ನ ಮಾಡಿವೆ.
ಉದ್ಘಾಟನೆ: ವಸ್ತು ಪ್ರದರ್ಶನ ಮಳಿಗೆಯನ್ನು ಸಂಸದ ಜಿ.ಎಸ್.ಬಸವರಾಜ್ ಉದ್ಘಾಟಿಸಿದರು. ನಂತರ ಸಮಾರಂಭದಲ್ಲಿ ಮಾತನಾಡಿದ ಅವರು, ವಸ್ತು ಪ್ರದರ್ಶನ ರೈತರಿಗೆ, ಯುವ ಜನರಿಗೆ ಮಾರ್ಗದರ್ಶನ ಶಿಬಿರದಂತಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಅನ್ನದಾಸೋಹ, ಮಕ್ಕಳಿಗೆ ಶಿಕ್ಷಣ ನೀಡು ವಷ್ಟಕ್ಕೆ ಸೀಮಿತವಾಗದ ಸಿದ್ದಗಂಗಾ ಮಠಾಧೀ ಶರು ಇಡೀ ಜನರ ಸರ್ವತೋಮುಖ ಅಭಿವೃದ್ಧಿ ಗಾಗಿ ಕನಸು ಕಂಡವರು. ವಸ್ತು ಪ್ರದರ್ಶನದ ಮೂಲಕ ರೈತರಿಗೆ, ಉದ್ಯಮಿಗಳಿಗೆ ಪ್ರೇರಣೆ ನೀಡುವ ಉದ್ದೇಶ ಹೊಂದಿದ್ದಾರೆ ಎಂದರು.
ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಬಿ. ಸುರೇಶಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾದ ರಾಧಾ ದೇವರಾಜು, ರಾಮಚಂದ್ರ, ಜಿಲ್ಲಾಧಿಕಾರಿ ಆರ್.ಕೆ.ರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರಾಜು ಇತರರು ಇದ್ದರು.
ವಸ್ತು ಪ್ರದರ್ಶನ ಸಮಿತಿ ಜಂಟಿ ಕಾರ್ಯದರ್ಶಿ ಕೆಂ.ಬ.ರೇಣುಕಯ್ಯ ಸ್ವಾಗತಿಸಿ ದರು. ಸಮಿತಿ ಜಂಟಿ ಕಾರ್ಯದರ್ಶಿ ಎಸ್. ಶಿವಕುಮಾರ್ ವರದಿ ಮಂಡಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಜಿ.ಕುಮಾರಸ್ವಾಮಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.