ತುಮಕೂರು: ಚುನಾವಣೆಯಲ್ಲಿ ಸೋತವರಿಗೆ ಅಧಿಕಾರ ಕೊಡಬಾರದು ಎಂದು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಇಲ್ಲಿ ಮಂಗಳವಾರ ಆಗ್ರಹಿಸಿದರು.
ಸೋತ ನಾಯಕರನ್ನು ಅಧಿಕಾರದಿಂದ ದೂರವಿಡಬೇಕು ಎಂದು ಈ ಹಿಂದೆಯೂ ಪ್ರತಿಪಾದಿಸಿದ್ದೆ. ಈಗಲೂ ಅದನ್ನೇ ಒತ್ತಿ ಹೇಳುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ 90ಕ್ಕೂ ಹೆಚ್ಚು ಮಂದಿ ಹಿರಿಯ ನಾಯಕರಿದ್ದು, ಅಧಿಕಾರ ಹಿಡಿಯಲು ಸಮರ್ಥರಾಗಿದ್ದಾರೆ ಎಂದು ಪರಮೇಶ್ವರ್ಗೆ ಉನ್ನತ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮಧುಗಿರಿ ಕ್ಷೇತ್ರದಿಂದ ಡಾ.ಜಿ.ಪರಮೇಶ್ವರ್ ಸ್ಪರ್ಧಿಸುವುದಾದರೆ ಈಗಲೂ ಸ್ಥಾನ ತ್ಯಜಿಸಲು ಸಿದ್ಧ. ಕೆಪಿಸಿಸಿ ಅಧ್ಯಕ್ಷರು ನೇರವಾಗಿ ಹೇಳಲಾಗದಿದ್ದರೂ ಮಾಧ್ಯಮಗಳ ಮೂಲಕವೇ ಹೇಳಲಿ. ಈ ಕ್ಷಣವೇ ಸ್ಪೀಕರ್ಗೆ ರಾಜೀನಾಮೆ ಪತ್ರ ಸಲ್ಲಿಸಿ, ನನ್ನ ಸ್ಥಾನ ತೆರವುಗೊಳಿಸುತ್ತೇನೆ ಎಂದರು.
ಕೆಟ್ಟ ಕಾಂಗ್ರೆಸ್ ಸ್ಥಿತಿ
ಜಿಲ್ಲೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಉತ್ತಮವಾಗಿಲ್ಲ. ಎಲ್ಲವೂ ಚೆನ್ನಾಗಿದೆ ಎನ್ನುವವರು ಹುಚ್ಚರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ನಾಲ್ಕರಲ್ಲಿ ಠೇವಣಿ ಕಳೆದುಕೊಂಡಿದೆ. ಫಲಿತಾಂಶ ಈಗಿರುವಾಗ ಕಾಂಗ್ರೆಸ್ ಸ್ಥಿತಿ ಉತ್ತಮವಾಗಿದೆ ಎಂದು ಹೇಳಲಾಗದು ಎಂದರು.
ಸೋತರೆ ಸಿಎಂ ತಲೆದಂಡ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆದಂಡ ನಿಶ್ಚಿತ. ಸಮರ್ಥರನ್ನು ಕಣಕ್ಕಿಳಿಸದಿದ್ದರೆ ಪಕ್ಷಕ್ಕೆ ಉಳಿಗಾಲ ಇರುವುದಿಲ್ಲ. ಸಿದ್ದರಾಮಯ್ಯ ಸರ್ಕಾರಕ್ಕೆ ಲೋಕಸಭಾ ಚುನಾವಣೆ ಅಗ್ನಿಪರೀಕ್ಷೆ ಆಗಲಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.