ADVERTISEMENT

ಹೆಚ್ಚು ಮಳೆಗೆ ಹಳದಿಯಾದ ತೊಗರಿ ಗಿಡದ ಎಲೆ

ಹುಳಿಯಾರು ಹೋಬಳಿ ಸುತ್ತಮುತ್ತ ಬೆಳೆದ ಬೆಳೆಯಲ್ಲಿ ಗೋಚರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 11:02 IST
Last Updated 26 ಅಕ್ಟೋಬರ್ 2017, 11:02 IST

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ತೊಗರಿ ಬೆಳೆಗೆ ರೋಗ ತಗುಲಿದ್ದು, ಗಿಡಗಳ ಎಲೆ ಹಳದಿ ಬಣ್ಣಕ್ಕೆ ತಿರುಗಿ ಬಾಡುತ್ತಿವೆ.

ಕೆಂಕೆರೆ ಸಮೀಪದ ಪುರದಮಠದ ಸುತ್ತ ಮುತ್ತಲಿನ ಹೊಲಗಳಲ್ಲಿ ಜೂನ್, ಜುಲೈ ತಿಂಗಳಿನಲ್ಲಿ ತೊಗರಿ ಬಿತ್ತನೆ ಮಾಡಿದ್ದರು. ಕೆಲವರು ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಉದ್ದು ಹಾಗೂ ಇತರ ಬೆಳೆಗಳ ಜತೆ ಅಕ್ಕಡಿ ಸಾಲಿನಲ್ಲಿ ತೊಗರಿ ಬಿತ್ತನೆ ಮಾಡಿದ್ದರು.

ಇತ್ತೀಚೆಗೆ ಬಿದ್ದ ಮಳೆಗೆ ತೊಗರಿ ಹುಲುಸಾಗಿ ಬೆಳೆದಿತ್ತಾದರೂ ಈಗ ಅಲ್ಲಲ್ಲಿ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು ರೈತರಲ್ಲಿ ಅತಂಕ ಮೂಡಿಸಿದೆ.

ADVERTISEMENT

‘ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಉದುರುತ್ತಿವೆ. ಗಿಡಗಳ ಬೆಳವಣಿಗೆಯೂ ಕಡಿಮೆಯಾಗಿದೆ’ ಎಂದು ಪುರದಮಠದ ಉಮೇಶ್ ಹೇಳಿದರು.

ಸತತವಾಗಿ ಮಳೆ ಬಿದ್ದ ಪರಿಣಾಮ ಹೊಲಗಳಲ್ಲಿ ನೀರು ನಿಂತರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನೀರು ನಿಂತಿದ್ದರೆ ಬಸಿಗಾಲುವೆ ತೋಡಿ ನೀರು ಹೊರ ಹಾಕಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್. ಹೊನ್ನದಾಸೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರು ನಿಂತಿಲ್ಲದಿದ್ದರೂ 1 ಗ್ರಾಂ ಬಾವಿಸ್ಟನ್ ಔಷಧಿಯನ್ನು 1 ಲೀಟರ್ ನೀರಿಗೆ ಬೇರಿಸಿ ಸಿಂಪಡಣೆ ಮಾಡಬಹುದು ಅಥವಾ ಬೇರಿಗೆ ಸುರಿಯಬಹುದು. ಈ ಔಷಧಿ ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.