ADVERTISEMENT

ತಿಪಟೂರು | ‘108’ ಆಂಬುಲೆನ್ಸ್‌ ಸೇವೆ ಸ್ಥಗಿತ: ತುರ್ತು ಸೇವೆಗೆ ಪರದಾಟ

ಕೆಟ್ಟು ನಿಂತ ತಿಪಟೂರು, ನೊಣವಿನಕೆರೆ ಆಸ್ಪತ್ರೆಯ ಆಂಬುಲೆನ್ಸ್

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:46 IST
Last Updated 9 ಅಕ್ಟೋಬರ್ 2025, 2:46 IST
ತಿಪಟೂರು ತಾಲ್ಲೂಕು ಆಸ್ಪತ್ರೆ ಹಿಂಭಾಗದಲ್ಲಿ ನಿಂತ ಆಂಬುಲೆನ್ಸ್‌ಗಳು 
ತಿಪಟೂರು ತಾಲ್ಲೂಕು ಆಸ್ಪತ್ರೆ ಹಿಂಭಾಗದಲ್ಲಿ ನಿಂತ ಆಂಬುಲೆನ್ಸ್‌ಗಳು    

ತಿಪಟೂರು: ನಗರದ ತಾಲ್ಲೂಕು ಆಸ್ಪತ್ರೆ ಹಾಗೂ ನೊಣವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ‘108’ ಆಂಬುಲೆನ್ಸ್ ಸೇವೆ ಕೆಲವು ದಿನಗಳಿಂದ ಸ್ಥಗಿತಗೊಂಡಿದೆ.

ತಾಲ್ಲೂಕಿನಲ್ಲಿದ್ದ ಎರಡು ‘108’ ಆಂಬುಲೆನ್ಸ್‌ಗಳನ್ನು ದುರಸ್ತಿ ಮತ್ತು ತಾಂತ್ರಿಕ ಸಮಸ್ಯೆಯಿಂದಾಗಿ ಆಸ್ಪತ್ರೆ ಹಿಂಬಾಗದಲ್ಲಿ ನಿಲ್ಲಿಸಲಾಗಿದೆ.

ಕಳೆದ ವಾರ ತಾಲ್ಲೂಕಿನಲ್ಲಿ ಆಂಬುಲೆನ್ಸ್‌ ಸೇವೆ ಹಾಗೂ ತುರ್ತು ಚಿಕಿತ್ಸೆ ಸಿಗದೆ ಕರೀಕೆರೆ ಗ್ರಾಮದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಸಾರ್ವಜನಿಕರು ತುರ್ತು ಸೇವೆಗಾಗಿ ಖಾಸಗಿ ಆಂಬುಲೆನ್ಸ್ ಮತ್ತು ವಾಹನಗಳ ಮೊರೆ ಹೋಗುವ ಅನಿವಾರ್ಯ ಎದುರಾಗಿದೆ.

ADVERTISEMENT

ತಿಪಟೂರು ತಾಲ್ಲೂಕು ಆಸ್ಪತ್ರೆಗೆ ಸುತ್ತಲಿನ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಅರಸೀಕೆರೆ, ಹುಳಿಯಾರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿ, ಬಾಣಂತಿಯರ ಬರುತ್ತಿದ್ದಾರೆ. ಹೆರಿಗೆ ಸಮಯದಲ್ಲಿ ‘108’ ಸೇವೆಯಿಲ್ಲದೆ ತಾಯಿ ಹಾಗೂ ಶಿಶುವಿನ ಜೀವಕ್ಕೆ ಅಪಾಯವಾದ ನಿದರ್ಶನಗಳಿವೆ.

ನಗರವಷ್ಟೇ ಅಲ್ಲದೆ ಸುತ್ತಲಿನ ಗ್ರಾಮಗಳ ಜನರು ‘108’ ಸೇವೆಯಿಲ್ಲದೆ ಸಮಸ್ಯೆಯಿಂದ ನರಳುತ್ತಿದ್ದಾರೆ. ದೂರದ ಗ್ರಾಮಗಳಿಂದ ಆಸ್ಪತ್ರೆಗೆ ಬರಲು ಅಂಬುಲೆನ್ಸ್‌ಗಳು ಲಭ್ಯವಿಲ್ಲದ ಕಾರಣ ರೋಗಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ಕೆಲವೊಮ್ಮೆ ಸಕಾಲಕ್ಕೆ ಆಸ್ಪತ್ರೆ ತಲುಪದೆ ಮಾರ್ಗಮಧ್ಯೆ ಮೃತಪಟ್ಟ ಉದಾಹರಣೆಗಳಿವೆ.

ತಾಲ್ಲೂಕಿನ ಕಿಬ್ಬನಹಳ್ಳಿಯಿಂದ ಕೊನೇಹಳ್ಳಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಅಲ್ಲಲ್ಲಿ ಗುಂಡಿಗಳು ಹೆಚ್ಚಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

‘ನಾವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಸವಾಗಿರುವುದರಿಂದ ನಿತ್ಯ ಅಪಘಾತವನ್ನು ನೋಡುತ್ತಿರುತ್ತೇವೆ. ಆಗ ‘108’ಕ್ಕೆ ಕರೆಮಾಡಿದರೆ ತಿಪಟೂರಿನ ಆಂಬುಲೆನ್ಸ್‌ಗಳು ದುರಸ್ತಿಯಲ್ಲಿವೆ. ಬೇರೆ ತಾಲ್ಲೂಕು ಕೇಂದ್ರದಿಂದ ಕಳುಹಿಸುತ್ತೇವೆ. ಸ್ವಲ್ಪ ಸಮಯ ಕಾಯಬೇಕು ಎಂಬ ಉತ್ತರ ಸಿಗುತ್ತದೆ. ಆಗ ಹತ್ತಿರದ ಆಟೊ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ’ ಎನ್ನುತ್ತಾರೆ ಬಿದರೆಗುಡಿಯ ಮಂಜುನಾಥ. 

‘108’ ಸೇವೆ ಸ್ಥಗಿತಗೊಂಡಿರುವುದು ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಕನ್ನಡಿ. ತುರ್ತು ಸಂದರ್ಭದಲ್ಲಿ ತಡವಾದರೆ ಅನಾಹುತದ ಸಾಧ್ಯತೆ ಹೆಚ್ಚಿರುತ್ತದೆ. ಆಂಬುಲೆನ್ಸ್ ಇರದಿದ್ದರೆ ಖಾಸಗಿ ವಾಹನಕ್ಕೆ ಹೆಚ್ಚು ಹಣ ತೆರವುದು ಅನಿವಾರ್ಯವಾಗುತ್ತದೆ’ ಎನ್ನುತ್ತಾರೆ ತಿಪಟೂರಿನ ಶಿವಕುಮಾರ್.

ಮೇಲಧಿಕಾರಿಗೆ ಮಾಹಿತಿ

‘ತಾಲ್ಲೂಕಿನಲ್ಲಿರುವ ‘108’ ಆಂಬುಲೆನ್ಸ್ ದುಸ್ಥಿತಿ ಬಗ್ಗೆ ಈಗಾಗಲೇ ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಅವರ ಕ್ರಮದ ನಿರೀಕ್ಷೆಯಲ್ಲಿದ್ದೇವೆ. ನಗರದ ಆಂಬುಲೆನ್ಸ್‌ಗೆ ಟೈರ್ ಸಮಸ್ಯೆಯಾಗಿದ್ದು ನೊಣವಿನಕೆರೆಯ ಆಂಬುಲೆನ್ಸ್‌ನಲ್ಲಿ ಎಂಜಿನ್‌ ದುರಸ್ತಿ ಅವಶ್ಯಕತೆಯಿದ್ದು ಸೇವೆಯಿಂದ ಸ್ಥಗಿತಕೊಂಡಿವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಚನ್ನಕೇಶವ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.