ತುಮಕೂರು: ‘ಜ.3ರಿಂದ 14ರವರೆಗೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿನ 451 ದೇವಾಲಯಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಬುಧವಾರ (ಜ. 3) ಆರಂಭಿಸಲಾಗುವುದು. ಈ ಕೆಲಸವನ್ನು ಸಂಕ್ರಾಂತಿ ಆರಂಭವಾಗುವ ಮುನ್ನ ಅಂದರೆ ಜ. 14ರ ಒಳಗೆ ಪೂರ್ಣಗೊಳಿಸಲಾಗುವುದು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪಿ.ರಾಧಾಕೃಷ್ಣ ರಾವ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಚ್ಛ ಭಾರತ ನಿರ್ಮಲ ಶ್ರದ್ಧಾ ಕೇಂದ್ರ ಪರಿಕಲ್ಪನೆ ಅಡಿಯಲ್ಲಿ ಪ್ರತಿ ವರ್ಷವೂ ದೇವಾಲಯಗಳ ಆಡಳಿತ ಮಂಡಳಿಗಳು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು. ‘ಈ ವರ್ಷ ಜಿಲ್ಲೆಯ ತುಮಕೂರು, ಗುಬ್ಬಿ, ತುರುವೇಕರೆ, ಕುಣಿಗಲ್, ತಿಪಟೂರು ತಾಲ್ಲೂಕುಗಳಲ್ಲಿ ಈ ಕಾರ್ಯ ನಡೆಯಲಿದೆ’ ಎಂದರು.
‘2015– 16ರಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸ್ವಚ್ಛ ಧಾರ್ಮಿಕ ನಗರ ಎಂಬ ಪ್ರಶಸ್ತಿ ನೀಡಿತ್ತು. ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ರಾಜ್ಯದ ದೇವಾಲಯಗಳ ಸ್ವಚ್ಛತಾ ಕಾರ್ಯಕ್ರಮವನ್ನು ರೂಪಿಸಿ, ಜಾರಿಗೆ ತಂದರು. ಕಳೆದ ವರ್ಷ ಜಿಲ್ಲೆಯಲ್ಲಿ 268 ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿತ್ತು. ಜನರು ಮತ್ತು ದೇವಾಲಯದ ಆಡಳಿತ ಮಂಡಳಿಗಳಿಂದ ಉತ್ತಮ ಸಹಕಾರ ದೊರೆತ ಕಾರಣ ಈ ಬಾರಿ ಸಂಖ್ಯೆ ಹೆಚ್ಚಿದೆ’ ಎಂದು ಮಾಹಿತಿ ನೀಡಿದರು.
‘ಜಿಲ್ಲೆಯ ಉಳಿದ ತಾಲ್ಲೂಕಿನ ದೇವಾಲಯಗಳ ಆಡಳಿತ ಮಂಡಳಿಯವರು ತಮ್ಮ ಗ್ರಾಮಗಳ ದೇವಾಲಯ ಸ್ವಚ್ಛಗೊಳಿಸುವಂತೆ ಕೋರಿದರೆ ಮತ್ತು ಸಹಕಾರ ನೀಡಿದರೆ ಅಲ್ಲಿಯೂ ಈ ಕೆಲಸ ಮಾಡಲಾಗುವುದು’ ಎಂದು ಹೇಳಿದರು.
‘ದೇವಾಲಯಗಳ ಒಳ ಮತ್ತು ಹೊರ ಆವರಣಗಳನ್ನು ಸ್ವಚ್ಛಗೊಳಿಸಲಾಗುವುದು. ದೇವಾಲಯಗಳನ್ನು ಪ್ರಾರ್ಥನಾ ಸ್ಥಳಗಳನ್ನಾಗಿ ನೋಡಬೇಕು’ ಎಂದರು. ಜನಜಾಗೃತಿ ಸಮಿತಿಯ ಡಾ.ಸಂಜಯ್ ನಾಯಕ್, ಯೋಜನಾಧಿಕಾರಿಗಳಾದ ಹರೀಶ್, ನಾಗೇಶ್, ಸಮನ್ವಯಾಧಿಕಾರಿ ಗಿರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.