ಚಿಕ್ಕನಾಯಕನಹಳ್ಳಿ: ‘ಸಂಕ್ರಾಂತಿ ಹಬ್ಬ ಬಂದಿದ್ದರೂ ಪುರಸಭೆಯಿಂದ ಸಂಬಳ ಬಂದಿಲ್ಲ’ ಎಂದು ಗುತ್ತಿಗೆ ಪೌರಕಾರ್ಮಿಕರು ಪುರಸಭೆ ಕಚೇರಿ ಎದುರು ಭಾನುವಾರ ಧರಣಿ ನಡೆಸಿದರು.
ಧರಣಿ ನಿರತ ಪೌರ ಕಾರ್ಮಿಕರು ವರ್ಷಕ್ಕೊಂದು ಹಬ್ಬ ಮಾಡಲು ಸಂಬಳ ನಿಡದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
‘ನೀರು ಸರಬರಾಜುದಾರರಿಗೆ 9 ತಿಂಗಳಿನಿಂದ, ವಾಹನ ಚಾಲಕರಿಗೆ 8 ತಿಂಗಳಿನಿಂದ ಮತ್ತು ಸಫಾಯಿ ಕರ್ಮಚಾರಿಗಳಿಗೆ 2 ತಿಂಗಳಿನಿಂದ ಸಂಬಳ ನೀಡಿಲ್ಲ’ ಎಂದು ಪೌರ ಕಾರ್ಮಿಕರು ಆರೋಪಿಸಿದರು.
‘ಸಂಬಳಕ್ಕಾಗಿ ಆಗ್ರಹಿಸಿ ಕಳೆದ ಶುಕ್ರವಾರದಿಂದಲೇ ಕೆಲಸ ಸ್ಥಗಿತಗೊಳಿಸಿದ್ದೇವೆ. ಆದರೂ ಪುರಸಭೆ ಮುಖ್ಯಾಧಿಕಾರಿ ಸೌಜನ್ಯಕ್ಕಾದರೂ ನಮ್ಮ ಸಮಸ್ಯೆ ಆಲಿಸಿಲ್ಲ. ಸಂಬಳ ಕೇಳಿದರೆ ‘ಎಸ್ಮಾ’ ಜಾರಿ ಮಾಡುತ್ತೇನೆ ಎಂದು ಧಮಕಿ ಹಾಕುತ್ತಾರೆ. ನೀವು ಗುತ್ತಿಗೆ ನೌಕರರು ನನ್ನ ಪೆನ್ನಿನ ತುದಿಯಲ್ಲಿ ನಿಮ್ಮ ಭವಿಷ್ಯ ಇದೆ. ತೆಪ್ಪಗೆ ಕೆಲಸಕ್ಕೆ ಹಾಜರಾಗಿ ಎಂದು ದರ್ಪ ತೋರಿದ್ದಾರೆ’ ಎಂದು ದೂರಿದರು.
‘ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ಮುಂದಿನ ಮಂಗಳವಾರ ಬೆಳಗ್ಗೆಯಿಂದಲೇ ಕುಟುಂಬ ಸಮೇತ ಅನಿರ್ಧಿಷ್ಠಾವದಿ ಧರಣಿ ಕೂರುತ್ತೇವೆ. ಪಟ್ಟಣದಲ್ಲಿ ಸಾರ್ವಜನಿಕರಿಗೆ ತೊಂದರೆಯಾದರೆ, ಪೌರ ಕಾರ್ಮಿಕರ ಸಾವು ನೋವು ಸಂಭವಿಸಿದರೆ ಪುರಸಭೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಪೌರ ಕಾರ್ಮಿಕ ಪಾಂಡುರಂಗಯ್ಯ ಮಾತನಾಡಿ, ಕೇಳಿದ 9 ಕಾರ್ಮಿಕರನ್ನು ಏಕಾ ಏಕಿ ಕೆಲಸದಿಂದ ಕಿತ್ತು ಹಾಕಿದ್ದಾರೆ ಕೆಲಸದಿಂದ ಕೈ ಬಿಟ್ಟಿರುವ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
**
ನಮಗೆ 9 ತಿಂಗಳಿಂದ ಸಂಬಳ ಆಗಿಲ್ಲ. ಹಬ್ಬಕ್ಕಾದರೂ ಸಂಬಳ ಕೊಡಿ ಎಂದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ಮಕ್ಕಳಿಗೆ ಬೇವು ಬೆಲ್ಲ ಕೊಡಿಸಲೂ ಆಗುತ್ತಿಲ್ಲ
ಶಿವಣ್ಣ, ಪೌರ ಕಾರ್ಮಿಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.