ADVERTISEMENT

ನೀರುಗಂಟಿಯಂತೆ ದುಡಿಯುತ್ತಿರುವ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 7:20 IST
Last Updated 30 ಜನವರಿ 2018, 7:20 IST

ತುರುವೇಕೆರೆ: ‘ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರಮೋದಿ ಅವರು ನೀರುಗಂಟಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಹೆಬ್ಬಾಳ ಕ್ಷೇತ್ರದ ಶಾಸಕ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಗುರುಭವನದ ಆವರಣದಲ್ಲಿ ಈಚೆಗೆ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ನವಭಾರತಕ್ಕಾಗಿ ನವ ಕರ್ನಾಟಕ ಹಾಗೂ ಜನಪರ ಶಕ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ದೇಶದ ಪ್ರತಿಯೊಬ್ಬ ಪ್ರಜೆಯ ಸಮಸ್ಯೆಗಳನ್ನು ಅತ್ಯಂತ ತಾಳ್ಮೆಯಿಂದ ಕೇಳುವ ಹಾಗೂ ಸ್ಪಂದಿಸುವ ಏಕೈಕ ಪಕ್ಷವಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಂತೆ ಹತಾಶೆಯ ಮನೋಭಾವದಿಂದ ಮಾತನಾಡುವುದು ನೋಡಿದರೆ ಕಾಂಗ್ರೆಸ್ ಪಕ್ಷದ ಅಂತ್ಯದ ಸೂಚಕವಾಗಿದೆ ಎಂದು ವ್ಯಂಗ್ಯವಾಗಿ ನುಡಿದರು.

ತಾಲ್ಲೂಕು ಬಿಜೆಪಿ ಮುಖಂಡ ಮಸಾಲೆಜಯರಾಮ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ತುರುವೇಕೆರೆಯಲ್ಲಿ ಪಶು ಆಹಾರ ಕಾರ್ಖಾನೆಯನ್ನು ತೆರೆಯುವ ಮೂಲಕ ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಹಾಗೂ ಸಬ್ಸಿಡಿ ದರದಲ್ಲಿ ಪಶು ಆಹಾರ ಪದಾರ್ಥಗಳನ್ನು ರೈತರಿಗೆ ನೀಡುವ ಚುನಾವಣಾ ಪ್ರಣಾಳಿಕೆಯನ್ನು ಹೊಂದಾಗಿದೆ ಎಂದರು.

ತಾಲ್ಲೂಕಿನ ವಿವಿಧ ವರ್ಗದ ಜನರಿಂದ ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯ ಬಗ್ಗೆ ಅಭಿಪ್ರಾಯಗಳನ್ನು ಪತ್ರದ ಮೂಲಕ ಸಂಗ್ರಹಿಸಲಾಯಿತು. ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ದುಂಡ ರೇಣುಕಪ್ಪ, ಮುಖಂಡರಾದ ಸುದರ್ಶನ್, ಗುರುದತ್, ನಾರಾಯಣ್, ದೊಂಬರನಹಳ್ಳಿ ಬಸವರಾಜ್, ಕೊಂಡಜ್ಜಿ ವಿಶ್ವನಾಥ್, ಮುನಿಯೂರು ರಂಗಸ್ವಾಮಿ, ಜಗದೀಶ್, ಅರಳಿಕೆರೆ ಶಿವಯ್ಯ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.