ADVERTISEMENT

ಟಿಕೆಟ್‌ಗಾಗಿ ಕೈ ನಾಯಕರ ಪರೇಡ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 7:14 IST
Last Updated 5 ಫೆಬ್ರುವರಿ 2018, 7:14 IST
ಸಂತೋಷ್ ಜಯಚಂದ್ರ
ಸಂತೋಷ್ ಜಯಚಂದ್ರ   

ತುಮಕೂರು: ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಟಿಕೆಟ್ ಬಯಸಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 64 ಮಂದಿ ಆಕಾಂಕ್ಷಿಗಳು ನಗರಕ್ಕೆ ಬಂದಿದ್ದ ವೀಕ್ಷಕರಿಗೆ ಭಾನುವಾರ ಅರ್ಜಿ ಸಲ್ಲಿಸಿದರು.

ವೀಕ್ಷಕರಾದ ಕೆ.ಬಿ.ಮಲ್ಲಿಕಾರ್ಜುನ್, ಎಚ್.ಪಿ.ಮೋಹನ್ ಅವರು ಅರ್ಜಿ ಸ್ವೀಕರಿಸಿದರು. ಬೆಳಿಗ್ಗೆ 11.30ರಿಂದಲೇ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಕಾಂಕ್ಷಿಗಳು ಒಬ್ಬೊಬ್ಬರಾಗಿ ಬಂದರು. ಸಂಜೆ 4.30ರ ವರೆಗೆ ಅರ್ಜಿಗಳನ್ನು ವೀಕ್ಷಕರು ಪಡೆದರು. ಆಕಾಂಕ್ಷಿಯ ವಿವರ, ಟಿಕೆಟ್ ಬಯಸಿರುವ ಕ್ಷೇತ್ರ ಹಾಗೂ ಮತದಾರ ಪಟ್ಟಿಯಲ್ಲಿರುವ ವಿವರವನ್ನು ಸಲ್ಲಿಸಿದರು. 

ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಫೀಕ್ ಅಹಮ್ಮದ್ ಹಾಗೂ ಅತೀಕ್ ಅಹಮ್ಮದ್, ತುಮಕೂರು ಗ್ರಾಮಾಂತರದಲ್ಲಿ ಮಾಜಿ ಶಾಸಕ ಎಚ್‌.ನಿಂಗಪ್ಪ, ಆರ್.ರಾಜೇಂದ್ರ, ರಾಯಸಂದ್ರ ರವಿಕುಮಾರ್, ಕಲ್ಲಹಳ್ಳಿ ದೇವರಾಜು, ಕೆ.ಎಸ್.ಗುರು ಪ್ರಸಾದ್, ಎಚ್.ಸಿ.ಹನುಮಂತಯ್ಯ, ಶಿವಮೂರ್ತಿ, ಪುರುಷೋತ್ತಮ್ ಸಿಂಧ್ಯ, ಗುಬ್ಬಿ ಕ್ಷೇತ್ರದಲ್ಲಿ ಜಿ.ಎಸ್. ಪ್ರಸನ್ನ ಕುಮಾರ್, ಆರ್.ನಾರಾಯಣ್, ಹೊನ್ನಗಿರಿ ಗೌಡ, ಬಾಲಾಜಿ ಕೆ. ಕುಮಾರ್, ಬಿ.ಎಲ್. ನರಸಿಂಹಯ್ಯ, ಎನ್.ಎಚ್. ಜಯಣ್ಣ, ಎಚ್.ಟಿ. ಕೃಷ್ಣಪ್ಪ, ಎಚ್.ಸಿ. ಹನುಮಂತಯ್ಯ, ಕೆ.ಆರ್. ತಾತಯ್ಯ, ಬಿ.ಜಿ. ನಿಂಗರಾಜು, ಶಂಕರಾನಂದ,
ಗಂಗಾಧರಯ್ಯ, ಮೊಹಮ್ಮದ್ ಸಾಧಿಕ್ ಅರ್ಜಿ ಸಲ್ಲಿಸಿದರು.

ADVERTISEMENT

ಪಾವಗಡದಲ್ಲಿ ವೆಂಕಟರಮಣಪ್ಪ, ಎಚ್.ವಿ.ವೆಂಕಟೇಶ್, ಮದ್ದೂರಪ್ಪ, ನರಸಪ್ಪ, ಎಚ್.ರಾಮಾಂಜನೇಯ, ಜೆ.ವಿ.ಬಲರಾಮ್, ಡಾ.ಪರಮೇಶ್ ನಾಯಕ್, ಸೇವಾನಾಯಕ್, ತಿಪಟೂರಿನಲ್ಲಿ ಶಾಸಕ ಕೆ.ಷಡಕ್ಷರಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್, ಡಾ.ಪರಮೇಶ ನಾಯ್ಕ್, ಕುಣಿಗಲ್‌ನಲ್ಲಿ ಎಚ್‌.ರಂಗನಾಥ್, ಬಿ.ಬಿ.ರಾಮಸ್ವಾಮಿ ಗೌಡ, ಶಿರಾದಲ್ಲಿ ಸಚಿವ ಟಿ.ಬಿ.ಜಯಚಂದ್ರ, ಮಧುಗಿರಿಯಲ್ಲಿ ಶಾಸಕ ಕೆ.ಎನ್.ರಾಜಣ್ಣ, ತುರುವೇಕೆರೆ ಕ್ಷೇತ್ರದಲ್ಲಿ ಗೀತಾ ರಾಜಣ್ಣ, ಮಂಜುನಾಥ ಅದ್ದೆ, ವಸಂತ್ ಕುಮಾರ್, ಕೆ.ಮಂಜು, ಬೆಟ್ಟಸ್ವಾಮಿಗೌಡ, ಸುಬ್ರಮಣಿ ಶ್ರೀಕಂಠೇಗೌಡ, ಕಮಲ ಸ್ವರ್ಣ ಕುಮಾರ್, ಉಗ್ರೇಗೌಡ, ಎಸ್.ಪಿ.ರಾಜಣ್ಣ, ಚೌದ್ರಿ ರಂಗಪ್ಪ, ಜಯರಾಮ್, ಜಯಲಕ್ಷ್ಮಮ್ಮ, ಟಿ. ಸುನೀಲ್ ಕುಮಾರ್, ಗಂಗಾಧರ ಗೌಡ, ಕೆ.ಎನ್.ಶಿವರಾಜು, ಡಿ.ಎಸ್.ಶಂಕರ ಪ್ರಸಾದ್, ಎನ್.ಆರ್.ಜಯರಾಮ್, ಚಿಕ್ಕನಾಯಕನಹಳ್ಳಿಯಲ್ಲಿ ಸಾಸಲು ಸತೀಶ್, ಸಂತೋಷ್ ಜಯಚಂದ್ರ, ಎಚ್.ಟಿ. ನಾಗರಾಜು, ರಾಮಚಂದ್ರಯ್ಯ ಡಾ.ಕೆ.ನಾಗಣ್ಣ, ಕೆ.ಜಿ.ಕೃಷ್ಣೇಗೌಡ, ವೈ.ಸಿ.ಸಿದ್ದರಾಮಯ್ಯ, ತು.ಬಿ.ಮಲ್ಲೇಶ್, ಮಲ್ಲಿಕಾರ್ಜುನ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತುಂಬಿದ ಕಚೇರಿ: ಆಕಾಂಕ್ಷಿಗಳು ಸರದಿಯಂತೆ ವೀಕ್ಷಕರಿಗೆ ಅರ್ಜಿ ನೀಡಿದರು. ಜಿಲ್ಲಾ ಕಚೇರಿ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರಿಂದ ತುಂಬಿ ತುಳುಕಿತ್ತು. ತಮ್ಮ ನಾಯಕರ ಪರ ಜೈಕಾರ ಕೂಗಿ ಪಟಾಕಿ ಸಿಡಿಸಿದರು.

‘ಕೆಪಿಸಿಸಿ ಆದೇಶದ ಮೇರೆಗೆ ನಾವು ಜಿಲ್ಲೆಗೆ ಬಂದು ಆಕಾಂಕ್ಷಿಗಳಿಂದ ಅರ್ಜಿ ಪಡೆದಿದ್ದೇವೆ. ಆಯಾ ಕ್ಷೇತ್ರಗಳಲ್ಲಿರುವ ಪರಿಸ್ಥಿತಿ ಆಕಾಂಕ್ಷಿಗಳ ಬಲಾಬಲ, ಎದುರಾಳಿಗಳ ಬಲಾಬಲವನ್ನು ಪರಿಗಣಿಸಿ ಒಂದು ಗುಪ್ತ ವರದಿಯನ್ನು ಸಿದ್ಧಗೊಳಿಸಿ ಕೆಪಿಸಿಸಿಗೆ ಸಲ್ಲಿಸುತ್ತೇವೆ. ಈ ಸಂಬಂಧ ಮತ್ತೆ ಜಿಲ್ಲೆಗೆ ಭೇಟಿ ನೀಡುತ್ತೇವೆ. ಕೆಪಿಸಿಸಿಯೇ ಟಿಕೆಟ್ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದೆ’ ಎಂದು ಕೆ.ಬಿ.ಮಲ್ಲಿಕಾರ್ಜುನ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಎಚ್.ಪಿ.ಮೋಹನ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ಇದ್ದರು.

ಮೂರು ಕಡೆ ಒಬ್ಬರೇ; ತುರುವೇಕೆರೆಯಲ್ಲಿ ಹೆಚ್ಚು

ಮಧುಗಿರಿ, ತಿಪಟೂರು, ಶಿರಾ  ಕ್ಷೇತ್ರದಲ್ಲಿ ಆಯಾ ಶಾಸಕರು ಬಿಟ್ಟರೆ ಬೇರೆ ಯಾರು ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಲಿಲ್ಲ. ತುರುವೇಕೆರೆ ಕ್ಷೇತ್ರದಿಂದ 17 ಮಂದಿ ಅರ್ಜಿ ಸಲ್ಲಿಸಿದ್ದು, ಇದೇ ಹೆಚ್ಚು ಆಕಾಂಕ್ಷಿಗಳ ಕ್ಷೇತ್ರವಾಗಿದೆ. ಮಾಧ್ಯಮಗೋಷ್ಠಿ ನಡೆಯುವಾಗಲೇ ಬಂದ ಗಂಗಾಧರ ಗೌಡ ಎಂಬುವವರು ತುರುವೇಕೆರೆ ಕ್ಷೇತ್ರಕ್ಕೆ ಅಲ್ಲಿಯೇ ಅರ್ಜಿ ನೀಡಿದರು. ತುಮಕೂರು ನಗರದಲ್ಲಿ ಕಾಂಗ್ರೆಸ್ ಶಾಸಕರು ಇದ್ದರೂ ಇಲ್ಲಿಗೆ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅತೀಕ್ ಅಹಮ್ಮದ್ ಅರ್ಜಿ ಸಲ್ಲಿಸಿದ್ದಾರೆ. ಬೈಕ್ ರ‍್ಯಾಲಿಯಲ್ಲಿ ಬಂದ ಅವರ ಪರವಾಗಿ ಬೆಂಬಲಿಗರು ಜೈಕಾರ ಮೊಳಗಿಸಿದರು.

10 ಕ್ಷೇತ್ರದಲ್ಲಿ ಮಹಿಳಾ ಆಕಾಂಕ್ಷಿಗಳೇ ಇಲ್ಲ

ತುರುವೇಕೆರೆಯಲ್ಲಿ ಮಾತ್ರ ಮೂವರು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಉಳಿದ 10 ಕ್ಷೇತ್ರಗಳಲ್ಲಿ ಒಬ್ಬರೂ ಅರ್ಜಿ ನೀಡಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಗೀತಾ ರಾಜಣ್ಣ, ಕಮಲಾ ಹಾಗೂ ಜಯಲಕ್ಷ್ಮಮ್ಮ ಟಿಕೆಟ್ ಕೇಳಿದ್ದಾರೆ.

ಪುತ್ರರ ಅರ್ಜಿ

ಸಚಿವ ಟಿ.ಬಿ.ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರ, ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್‌. ರಾಜೇಂದ್ರ ಕ್ರಮವಾಗಿ ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರು ಗ್ರಾಮಾಂತರದಿಂದ ಟಿಕೆಟ್ ಬಯಸಿ ಅರ್ಜಿ ನೀಡಿದ್ದಾರೆ. ಎರಡು ಬಾರಿ ಬೆಳ್ಳಾವಿ ಕ್ಷೇತ್ರದ ಶಾಸಕರಾಗಿದ್ದ ನಾರಾಯಣ್ ಗುಬ್ಬಿ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅಪ್ಪ–ಮಗ ಪೈಪೋಟಿ

ಪಾವಗಡ ಕ್ಷೇತ್ರದಿಂದ ಅಪ್ಪ–ಮಗ ಇಬ್ಬರೂ ಅರ್ಜಿ ಸಲ್ಲಿಸುವ ಮೂಲಕ ಮತ್ತೊಮ್ಮೆ ಅಪ್ಪ–ಮಗ ಟಿಕೆಟ್‌ ಪೈಪೋಟಿಗೆ ಮುಗಿಬಿದಿದ್ದಾರೆ. ಮಾಜಿ ಸಚಿವ ವೆಂಕಟರಮಣಪ್ಪ, ಅವರ ಪುತ್ರ ಎಚ್‌.ವಿ.ವೆಂಕಟೇಶ್‌ ಇಬ್ಬರೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದರು. ಕಳೆದ ಸಲ ವೆಂಕಟೇಶ್‌ ಸೋಲುಂಡಿದ್ದರು. ಅಪ್ಪ–ಮಗ ಇಬ್ಬರಲ್ಲಿ ಈ ಸಲ ಯಾರಿಗೆ ಟಿಕೆಟ್‌ ಎಂಬುದು ಕುತೂಹಲ ಕೆರಳಿಸಿದೆ.

ಜನರೇ ಸಲ್ಲಿಸಿದರು ಅರ್ಜಿ!

ತುಮಕೂರು ತಾಲ್ಲೂಕನ್ನು ಬಯಲು ಶೌಚ ಮುಕ್ತ ತಾಲ್ಲೂಕು ಮಾಡುವ ಮೂಲಕ ಬೆಳಕಿಗೆ ಬಂದ ತುಮಕೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಾಗಣ್ಣ  ಅವರಿಗೆ ಚಿಕ್ಕನಾಯಕಹಳ್ಳಿ ಕ್ಷೇತ್ರದಿಂದ  ಟಿಕೆಟ್‌ ನೀಡುವಂತೆ ಅಲ್ಲಿನ ಪಕ್ಷದ ಕಾರ್ಯಕರ್ತರೇ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವೀಕ್ಷಕರು ಮಾನ್ಯ ಮಾಡಿದ್ದಾರೆ.

ಇನ್ನೂ ನಾಗಣ್ಣ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಶಾಖೆಯಲ್ಲಿ  ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದರು. ‘ನಾನು ಅರ್ಜಿ ಸಲ್ಲಿಸಿಲ್ಲ. ಕೆಲಸಕ್ಕೆ ರಾಜೀನಾಮೆ ಸಲ ನೀಡಿಲ್ಲ. ಅಲ್ಲಿನ ಜನರು ದುಂಬಾಲು ಬಿದ್ದು ಅವರೇ ಅರ್ಜಿ ಸಲ್ಲಿಸಿದ್ದಾರೆ’ ಎಂದು ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.