ತುಮಕೂರು: ಶಿಕ್ಷಕ ದಂಪತಿಯ ಪುತ್ರ, ತಾಲ್ಲೂಕಿನ ಹೆಬ್ಬೂರು ಹೋಬಳಿಯ ಲಿಂಗಾಪುರ ಗ್ರಾಮದ ರಕ್ಷಿತ್ ಕೆ.ಗೌಡ ಯುಪಿಎಸ್ಸಿ ಪರೀಕ್ಷೆಯಲ್ಲಿ 802ನೇ ರ್ಯಾಂಕ್ ಪಡೆದಿದ್ದಾರೆ.
ತಂದೆ ಎಂ.ಕೆಂಪರಾಜು ಪ್ರೌಢಶಾಲೆ ಶಿಕ್ಷಕ, ತಾಯಿ ಪ್ರಾಥಮಿಕ ಶಾಲೆ ಶಿಕ್ಷಕಿ. ಮಗನನ್ನು ಉನ್ನತ ಸ್ಥಾನದಲ್ಲಿ ನೋಡಬೇಕು ಎಂಬ ಪೋಷಕರ ಕನಸು ನನಸಾಗಿದೆ. ರಕ್ಷಿತ್ ಸತತ ಪರಿಶ್ರಮದಿಂದ ಗೆಲುವಿನ ದಡ ಸೇರಿದ್ದಾರೆ. 4ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ನಗರದ ಎಸ್ಜಿಆರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ, ಬೆಂಗಳೂರಿನ ಅಮೃತ ವಿಶ್ವವಿದ್ಯಾಪೀಠದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಪದವಿ ಪೂರ್ಣಗೊಳಿಸಿದ ನಂತರ ಯುಪಿಎಸ್ಸಿ ಪರೀಕ್ಷೆಯ ಕಡೆಗೆ ಗಮನ ಹರಿಸಿದರು. 2022ರಲ್ಲಿ 15 ಅಂಕಗಳ ಅಂತರದಲ್ಲಿ ರ್ಯಾಂಕ್ ತಪ್ಪಿತ್ತು. 2023ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
‘ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ. ಕನಸು ನನಸಾಗಲು ಪ್ರಯತ್ನ ನಿರಂತರವಾಗಿರಬೇಕು. ಸೋಲಿಗೆ ಕುಗ್ಗದೆ ಮುಂದೆ ಸಾಗಿದರೆ ಯಶಸ್ಸು ಸುಲಭವಾಗಲಿದೆ’ ಎಂದು ರಕ್ಷಿತ್ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.