ADVERTISEMENT

ತುಮಕೂರು: ಸಂಚಲನ ಮೂಡಿಸಿದ ಎಸ್‌ಪಿಎಂ ನಡೆ

ಕುಣಿಗಲ್‌ ತಾಲ್ಲೂಕು ಕಾಂಗ್ರೆಸ್‌ನಲ್ಲಿ ಬಣ ರಾಜಕೀಯಕ್ಕೆ ನಾಂದಿ?

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 2:53 IST
Last Updated 26 ಜುಲೈ 2021, 2:53 IST
ಮುದ್ದಹನುಮೇ ಗೌಡ
ಮುದ್ದಹನುಮೇ ಗೌಡ   

ಕುಣಿಗಲ್: ತುಮಕೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ (ಎಸ್‌ಪಿಎಂ) ಅವರುಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿರುವ ವಿಷಯವನ್ನು ಕೆಪಿಸಿಸಿ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಅವರಲ್ಲಿ ಮಂಡಿಸಿದ್ದು, ತಾಲ್ಲೂಕು ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮೂಲತಃ ಕುಣಿಗಲ್ ತಾಲ್ಲೂಕಿನವರಾಗಿರುವ ಮುದ್ದಹನುಮೇಗೌಡ, ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದರು. ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿ, ಜೆಡಿಎಸ್ ಸೇರಿ ಅಲ್ಲೂ ಟಿಕೆಟ್ ವಂಚಿತರಾಗಿ ನಂತರ ಕಾಂಗ್ರೆಸ್‌ ಸೇರಿ ತುಮಕೂರು ಸಂಸದರಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯಿಂದಾಗಿ ಮತ್ತೆ ಸಂಸದರಾಗುವ ಅವಕಾಶದಿಂದ ವಂಚಿತರಾಗಿದ್ದರು. ಈಗ ಮತ್ತೆ ಸ್ವಕ್ಷೇತ್ರದಲ್ಲಿ ರಾಜಕೀಯಅಸ್ಥಿತ್ವಕ್ಕಾಗಿ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಇದುವರೆಗೂ ತಾಲ್ಲೂಕಿನಲ್ಲಿ ಸಂಚರಿಸುತ್ತಾ ಅಭಿಮಾನಿಗಳ, ಸಂಬಂಧಿಕರು ಮತ್ತು ಕಾರ್ಯಕರ್ತರ ಸಂಪರ್ಕದಲ್ಲಿದ್ದು, ರಾಜಕೀಯಕ್ಕೆ ಬರುವ ಸಂದೇಶ ನೀಡುತ್ತಿದ್ದರು. ಶನಿವಾರದ ಸಭೆಯಲ್ಲಿ ಪಕ್ಷದ ಉಸ್ತುವಾರಿ ಮುಂದೆ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಬಗ್ಗೆ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿತೀವ್ರ ಚರ್ಚೆಯಾಗುತ್ತಿದ್ದು, ಹಾಲಿ ಶಾಸಕ ಡಾ.ರಂಗನಾಥ್ ಸಮರ್ಪಕವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ಸಂಬಂಧಿ. ಹಾಗಾಗಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್‌ ಸಿಗುವುದೇ? ಎಂದು ತಾಲ್ಲೂಕಿನಲ್ಲಿ ಚರ್ಚೆಯಾಗುತ್ತಿದೆ.

ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಒಂದು ಗುಂಪು ಮನಸ್ಸಿನಲ್ಲೇ ಲೆಕ್ಕಾಚಾರ ಮಾಡುತ್ತಿದ್ದು, ಮುದ್ದಹನುಮೇಗೌಡರ ಪರವಿದ್ದು, ಆಂತರಿಕವಾಗಿಯೇ ಬೆಂಬಲಿಸುತ್ತಿದ್ದಾರೆ. ಒಂದೆಡೆ ಎಸ್‌ಪಿಎಂ ಬೆಂಬಲಿಗರುಎಂದು ಗುರುತಿಸಿಕೊಂಡವರನ್ನು ಶಾಸಕರು ಕಡೆಗಾಣಿಸುತ್ತಿದ್ದು, ಯುವಕರನ್ನು ಸಳೆಯುವ ಯತ್ನ ಮುಂದುವರೆಸಿದ್ದಾರೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೊ ಅವರನ್ನು ಬೆಂಬಲಿಸುವುದೇಕರ್ತವ್ಯ ಎಂದು ಕಾದು ಕುಳಿತ್ತಿದ್ದಾರೆ. ಇನ್ನೂ ಶಾಸಕರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಶಾಸಕಬಿ.ಬಿ.ರಾಮಸ್ವಾಮಿಗೌಡ ಸಹ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ನಡೆಸಿದ ಸಭೆಯ ನಂತರ ತಾಲ್ಲೂಕಿನ ಕಾಂಗ್ರೆಸ್ ವಲಯದಲ್ಲಿ ಡಾ.ರಂಗನಾಥ್, ಎಸ್‌ಪಿಎಂ ಮತ್ತು ರಾಮಸ್ವಾಮಿಗೌಡ ಬಣಗಳ ನಿರ್ಮಾಣವಾಗಿದ್ದು,ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಂತರ ಬಣ ರಾಜಕೀಯ ಚಟುವಟಿಕೆಗಳು ತ್ರೀವ್ರವಾಗಲಿವೆ ಎನ್ನುತ್ತಾರೆ ತಾಲ್ಲೂಕಿನ ರಾಜಕೀಯ ಚಿತ್ರಣ ಬಲ್ಲವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.