ADVERTISEMENT

ಎಸಿಬಿ ಬಲೆಗೆ ಮಧ್ಯವರ್ತಿಗಳು

ಜಮೀನು ದಾಖಲೆ; ತಹಶೀಲ್ದಾರ್ ಹೆಸರು ಹೇಳಿ ₹ 1.25 ಲಕ್ಷಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 16:43 IST
Last Updated 1 ಜುಲೈ 2020, 16:43 IST
ಭ್ರಷ್ಟಾಚಾರ ನಿಗ್ರಹದಳ
ಭ್ರಷ್ಟಾಚಾರ ನಿಗ್ರಹದಳ   

ತುಮಕೂರು: ಜಮೀನಿನ ದಾಖಲೆಗಳ ವಿಚಾರವಾಗಿ ತಹಶೀಲ್ದಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ₹ 1.20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ರುದ್ರಸ್ವಾಮಿ, ಶಿವಕುಮಾರ್ ಬಂಧಿತರು. ಕೋರ ಹೋಬಳಿ ಕರೀಕೆರೆ ಗ್ರಾಮದ ರಂಗನಾಥ್ ಅವರು ಜಮೀನಿನ 1–5 ನಮೂನೆಯನ್ನು ತಹಶೀಲ್ದಾರ್ ಅವರಿಂದ ಪಡೆಯಬೇಕಿತ್ತು. ಆರೋಪಿ ಶಿವಕುಮಾರ್, ‘ನಾನು ತುಮಕೂರು ತಹಶೀಲ್ದಾರ್ ಮೋಹನ್ ಎಂದು ರಂಗನಾಥ್ ಅವರಿಗೆ ಕರೆ ಮಾಡಿ ಹೇಳಿದ್ದರು. ಈ ದಾಖಲೆಗಾಗಿ ₹ 1.25 ಲಕ್ಷವನ್ನು ನೀಡಬೇಕು. ಆ ಹಣ ಮತ್ತು ಸಂಬಂಧಿಸಿದ ದಾಖಲೆಗಳನ್ನು ರುದ್ರಸ್ವಾಮಿ ಬಳಿ ನೀಡಿ’ ಎಂದು ತಿಳಿಸಿದ್ದರು. ₹ 5 ಸಾವಿರವನ್ನು ಪಡೆದಿದ್ದರು. ಉಳಿದ ಹಣ ನೀಡುವಂತೆ ಆಗ್ರಹಿಸಿದ್ದರು.

ನಗರದ ಉಪ್ಪಾರಹಳ್ಳಿ ಮೇಲ್ಸೇತುವೆ ಬಳಿ ಬುಧವಾರ ರುದ್ರಸ್ವಾಮಿ, ರಂಗನಾಥ್ ಅವರಿಂದ ₹ 1.20 ಲಕ್ಷ ಸ್ವೀಕರಿಸುವಾಗ ಎಸಿಬಿ ಡಿವೈಎಸ್‌ಪಿ ಉಮಾಶಂಕರ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ತಹಶೀಲ್ದಾರ್ ಹೆಸರಿನಲ್ಲಿ ಕರೆ ಮಾಡಿ ವಂಚಿಸಿದ್ದ ಶಿವಕುಮಾರ್‌ನನ್ನು ಬಂಧಿಸಿದರು.

ADVERTISEMENT

ಎಸಿಬಿ ಅಧಿಕಾರಿಗಳಾದ ಪ್ರವೀಣ್ ಕುಮಾರ್, ಇಮ್ರಾನ್ ಬೇಗ್, ಸಿಬ್ಬಂದಿ ಡಿ.ನರಸಿಂಹರಾಜು, ಕೆ.ಪಿ.ಶಿವಣ್ಣ, ಎಂ.ಚಂದ್ರಶೇಖರ್, ಎಲ್.ನರಸಿಂಹರಾಜು, ಟಿ.ಎಸ್.ಗಿರೀಶ್ ಕುಮಾರ್, ಮಹೇಶ್ ಕುಮಾರ್, ರಮೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.