ಹುಳಿಯಾರು: ಗೊಬ್ಬರಕ್ಕೆ ರೈತರಿಂದ ಬೇಡಿಕೆ ಹೆಚ್ಚಾದ ಸಮಯದಲ್ಲಿ ಗೊಬ್ಬರದ ಅಂಗಡಿ ಮಾಲೀಕರು ಕೃತಕ ಅಭಾವ ಸೃಷ್ಟಿಸಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಡಿ.ಉಮೇಶ್ ತಿಳಿಸಿದರು.
ಪಟ್ಟಣದ ವಿವಿಧ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಿಗೆ ಅನಿರೀಕ್ಷಿತ ದಾಳಿ ನಡೆಸಿ ಪರವಾನಗಿ, ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನಿನ ಪರಿಶೀಲನೆ ನಡೆಸಿ ಮಾತನಾಡಿದರು.
ಯೂರಿಯಾ ಅಥವಾ ಇತರೆ ಗೊಬ್ಬರಗಳ ಜತೆ ಬೇರೊಂದನ್ನು ಲಿಂಕ್ ಮಾಡುವುದು ಕಂಡು ಬಂದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು. ನಕಲಿ ಬೀಜ ಮಾರಾಟ ಕಂಡು ಬಂದಲ್ಲಿ ಪರವಾನಗಿ ರದ್ದು ಮಾಡ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೃಷಿ ಇಲಾಖೆಯ ಎಎಒ ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ ಇದ್ದರು.
***
ಯೂರಿಯಾ ಅಧಿಕ ಬಳಕೆ ಬೇಡ
ಯೂರಿಯಾ ಗೊಬ್ಬರವನ್ನು ಅಧಿಕವಾಗಿ ಬಳಸಬಾರದು. ಒಂದು ಏಕರೆ ರಾಗಿ ಸೇರಿದಂತೆ ಇತರ ಬೆಳೆಗಳಿಗೆ 20 ಕೆ.ಜಿ. ಸಾಕಾಗುತ್ತದೆ. ಯೂರಿಯಾ ಬೇವು ಲೇಪಿತ ಆಗಿರುವುದರಿಂದ ಕಡಿಮೆ ಬಳಸಿದರೆ ಸಾಕು.
– ಡಿ.ಉಮೇಶ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.