ತಿಪಟೂರು: ನೀರು ಅಮೂಲ್ಯ ಸಂಪತ್ತು. ನೀರನ್ನು ಉಳಿಸಿ, ಅಂತರ್ಜಲ ವೃದ್ಧಿಸುವ ಕಾರ್ಯ ಮಾಡಬೇಕು ಎಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಜಗದೀಶ್ ಹೇಳಿದರು.
ನಗರದ ಕಲ್ಪತರು ವಿದ್ಯಾಸಂಸ್ಥೆ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಿಂದ ನಡೆದ ಮಳೆ ನೀರು ಸಂರಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಜೀವಿಗೂ ನೀರು ಅಗತ್ಯ. ನೀರಿನ ಸಮರ್ಪಕ ಮರುಬಳಕೆ ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿನ ಗಿಡ-ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮಳೆಯ ಪ್ರಮಾಣ ಕಡಿಮೆ ಆಗುತ್ತಿದೆ. ಇಸ್ರೇಲ್ನಲ್ಲಿ ಸಮುದ್ರದ ನೀರನ್ನು ಶುದ್ಧೀಕರಿಸಿ ವಿವಿಧ ಉಪಯೋಗಕ್ಕೆ ಬಳಸಲಾಗುತ್ತಿದೆ. ಭಾರತದಲ್ಲಿಯೂ ಆ ಮಾದರಿ ಬಂದರೆ ಅಚ್ಚರಿ ಪಡುವಂತಿಲ್ಲ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಸಿ.ಎಂ.ಎಸ್. ಲೋಕೇಶ್ವರಯ್ಯ ಮಾತನಾಡಿ, ಪ್ರತಿ ಗ್ರಾಮಗಳಲ್ಲಿನ ಯುವಜನರು ಜಾಗೃತರಾಗುತ್ತಿದ್ದಾರೆ. ಗಿಡ-ಮರ ಬೆಳೆಸುವ ಸಂರಕ್ಷಿಸುತ್ತಿದ್ದಾರೆ. ನೀರಿನ ಮೂಲ ಸಂರಕ್ಷಿಸಿ ತೋಟಗಳಲ್ಲಿ ಇಂಗು ಗುಂಡಿಗಳ ನಿರ್ಮಾಣ ಮೂಲಕ ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವಂತೆ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ ನೀರನ್ನು ನೀಡುವ ಜೊತೆಗೆ ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದರು.
ಕಾಲೇಜಿನ ಆವರಣದಲ್ಲಿ ಎನ್ಎಸ್ಎಸ್ ಸ್ವಯಂ ಸೇವಕ ವಿದ್ಯಾರ್ಥಿಗಳು ನೆಡುತೋಪುಗಳಲ್ಲಿ ಸಣ್ಣ-ಸಣ್ಣ ಇಂಗುಗುಂಡಿ ನಿರ್ಮಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿಗಳಾದ ಶ್ರೀನಿವಾಸ್ ಬಿ., ಎಂ.ಸಿ.ಯೋಗಾನಂದ, ಹಿರಿಯ ಪ್ರಾಧ್ಯಾಪಕ ಎಚ್.ಆರ್.ಧನಂಜಯ, ದಿಲೀಪ್ ಷಾ, ಡಾ.ಲಲಟಾಕ್ಷಮೂರ್ತಿ, ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.