ತುಮಕೂರು: ಹತ್ತಿ ಬೀಜ ಮಾರಾಟ ಕಂಪನಿಗಳು ರೈತರೊಂದಿಗೆ ಆಗಸ್ಟ್ 3ರ ಒಳಗೆ ಒಡಂಬಡಿಕೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶಿಸಿದ್ದಾರೆ.
ರೈತರು ಹಾಗೂ ಹತ್ತಿ ಬೀಜ ಮಾರಾಟ ಕಂಪನಿಗಳ ಏಜೆಂಟರೊಂದಿಗೆ ಶುಕ್ರವಾರ ಸಭೆ ನಡೆಸಿದರು.
ಜಿಲ್ಲೆಯ ಶಿರಾ, ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ 4,835 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲಾಗುತ್ತಿದೆ. ಕೆಲವು ಖಾಸಗಿ ಬೀಜ ಮಾರಾಟ ಕಂಪನಿಗಳು ಹತ್ತಿ ಬೀಜ ನೀಡಿ ಕಾನೂನು ಬಾಹಿರವಾಗಿ ಬೀಜೋತ್ಪಾದನೆ ಮಾಡಿಕೊಂಡು ಹಣ ನೀಡದೆ ವಂಚಿಸಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಬೀಜ ಮಾರಾಟ ಕಂಪನಿಗಳು ರೈತರೊಂದಿಗೆ ಕಡ್ಡಾಯವಾಗಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಒಡಂಬಡಿಕೆಯಂತೆ ರೈತರ ಬ್ಯಾಂಕ್ ಖಾತೆಗೆ ಹಣ ಪಾವತಿಸಬೇಕು. ಹತ್ತಿ ಬೀಜ ಖರೀದಿಸಿದ ನಂತರ ಬೀಜ ಅಧಿನಿಯಮದ ಅನ್ವಯ ಮೂರು ತಿಂಗಳ ಅವಧಿಯಲ್ಲೇ ಜಿಒಟಿ ಪರೀಕ್ಷೆಗೆ ಒಳಪಡಿಸಿ ನಿಗದಿತ ಬೆಲೆಯ ಹಣವನ್ನು ರೈತರ ಖಾತೆಗೆ ಪಾವತಿಸಬೇಕು. ಹಣ ಪಾವತಿಯಲ್ಲಿ ವಿಳಂಬ ನೀತಿ ಅನುಸರಿಸಿದರೆ ಅಂತಹ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ‘ಈಗಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ ಹತ್ತಿ ಬೆಳೆ ಬೆಳೆಯಲು 18 ಕಂಪನಿಗಳು ರೈತರೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಒಪ್ಪಂದದ ಪ್ರಕಾರ ರೈತರು ಬೆಳೆದ ಹತ್ತಿ ಬೀಜವನ್ನು ಸಂಪೂರ್ಣವಾಗಿ ಖರೀದಿಸಬೇಕು. ಖರೀದಿ ಮಾಡದ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿ, ಲೈಸೆನ್ಸ್ ರದ್ದುಪಡಿಸಲಾಗುವುದು’ ಎಂದು ಎಚ್ಚರಿಸಿದರು.
ಪ್ರಕೃತಿಯ ಅನಾಹುತದಿಂದ ಬೆಳೆ ನಾಶವಾದರೆ ಕಂಪನಿಯವರೇ ಪರಿಹಾರ ನೀಡಬೇಕು. ಸಾಲದ ಒತ್ತಡದಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ಅಥವಾ ಅನುಮೋದನೆ ಇಲ್ಲದ ಕಂಪನಿಗಳು ಮೋಸ ಮಾಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಈಶ್ವರಪ್ಪ, ರೈತ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.