ADVERTISEMENT

ಡೇರಿಯಲ್ಲಿ ಅವ್ಯವಹಾರ ಆರೋಪ: ನಿಬಂಧಕರಿಗೆ ಪತ್ರ ಬರೆದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 16:36 IST
Last Updated 27 ಸೆಪ್ಟೆಂಬರ್ 2020, 16:36 IST

ಕೊಡಿಗೇನಹಳ್ಳಿ: ‘ನನ್ನ ಮೇಲೆ ಒತ್ತಡ ಹೇರಿ ಖಾಲಿ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಪುರವರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶನಿವಾರಪ್ಪ ಅವರು ಸಂಘದ ಕಾರ್ಯದರ್ಶಿ ಕೆ. ರಂಗನಾಥ್ ವಿರುದ್ಧ ಬೆಂಗಳೂರಿನ ಸಹಾಯಕ ಸಂಘಗಳ ನಿಬಂಧಕರು ಮತ್ತು ತುಮಕೂರು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಿದ್ದಾರೆ.

‘ನಾನು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಹಾಗೂ ಅವಿದ್ಯಾವಂತ ಎಂಬ ಕಾರಣಕ್ಕೆ ನನಗೆ ಹೆದರಿಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಒತ್ತಾಯ ಪೂರ್ವಕವಾಗಿ ಕಾರ್ಯದರ್ಶಿ ಸಹಿ ಮಾಡಿಸಿಕೊಂಡಿದ್ದಾರೆ’ ಎಂದು ದೂರಿದರು.

ಸಂಘದ ನಿರ್ದೇಶಕ ಪಿ.ಡಿ. ಕೃಷ್ಣಪ್ಪ ಅವರು ಕಾರ್ಯನಿರ್ವಹಣೆಗೆ ಸಹಕಾರ ನೀಡುತ್ತಿಲ್ಲ. ಈಗಾಗಲೇ ಹೊಸ ಸಿಬ್ಬಂದಿ ನೇಮಕಕ್ಕೆ ತಯಾರಿ ನಡೆಸಿರುವ ರಂಗನಾಥ್ ಸಹಾಯಕ ಸಿಬ್ಬಂದಿ ಹುದ್ದೆಗೆ ಅವರ ಪತ್ನಿಯನ್ನೇ ನೇಮಿಸಲು ಹೋರಾಟ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿದ ನನಗೆ ಡೇರಿಯ ಹಣಕಾಸಿನ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದರು.

ADVERTISEMENT

ಕೋವಿಡ್ ಸಮಯದಲ್ಲಿ ಹಾಲು ಉತ್ಪಾದಕರು ಹಾಗೂ ಸಿಬ್ಬಂದಿಗೆ ಬೋನಸ್ ನೀಡುವಂತೆ ಹೇಳಿದ್ದರೂ ಇದುವರೆಗೆ ಬೋನಸ್ ನೀಡಿಲ್ಲ. ಒತ್ತಡದಲ್ಲಿ ನನ್ನಿಂದ ಸಹಿ ಪಡೆದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿ ಪತ್ರ ಬರೆದಿದ್ದೇನೆ ಎಂದುಶನಿವಾರಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.