ತುಮಕೂರು: ನಗರದ ಕೃಷ್ಣಾನಗರದ ವಿದ್ಯಾವಾಹಿನಿ ಕಾಲೇಜು ರಸ್ತೆಯ ನಿವಾಸಿ ಜೀಜಾಬಾಯಿ ಅವರ ಮನೆಯಲ್ಲಿ ಏಪ್ರಿಲ್ 1ರಂದು ₹ 2.92 ಲಕ್ಷ ನಗದು, 61 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಂಜುನಾಥರಾವ್ ಎಂಬುವನಾಗಿದ್ದು, ನಗರದ ಬಡ್ಡಿಹಳ್ಳಿಯ 1ನೇ ಮುಖ್ಯ ರಸ್ತೆಯ 9ನೇ ಕ್ರಾಸ್ ನಿವಾಸಿಯಾಗಿದ್ದಾನೆ. ಈತ ಆರ್ಎಂಸಿ ಯಾರ್ಡಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 1ರಂದು ಸಿದ್ಧಗಂಗಾಮಠದಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮಕ್ಕೆ ಜೀಜಾಬಾಯಿ ಹೋಗಿದ್ದಾಗ ಕಳವು ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
₹ 2.5 ಲಕ್ಷ ನಗದು, ₹ 1.5 ಲಕ್ಷ ಬೆಲೆಬಾಳುವ ಚಿನ್ನಾಭರಣವನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಎಎಸ್ಪಿ ಡಾ.ಶೋಭಾರಾಣಿ, ಡಿಎಸ್ಪಿ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ಸಿಪಿಐ ರಾಧಾಕೃಷ್ಣ, ಹೊಸಬಡಾವಣೆ ಠಾಣೆ ಟಿ.ಶಿವಲಿಂಗಪ್ಪ, ಟಿ.ಎಸ್. ಮಂಜುನಾಥ್, ಅರ್.ಮಂಜುನಾಥ್ ಅವರ ತಂಡ ಆರೋಪಿ ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.