ADVERTISEMENT

ರಕ್ಷಣಾ ಸಾಧನ; ಪ್ರೋತ್ಸಾಹ ಧನ ನೀಡಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 16:19 IST
Last Updated 7 ಆಗಸ್ಟ್ 2020, 16:19 IST
ಪಾವಗಡ ತಹಶಿಲ್ದಾರ್ ಕಚೇರಿಯಲ್ಲಿ ಬೇಡಿಕೆ ಈಡೇರಿಸುವಂತೆ ಅಂಗನವಾಡಿ ಬಿಸಿಯೂಟ, ಆಶಾ ಸಂಘಟನೆಗಳ ಪದಾಧಿಕಾರಿಗಳು ಖಾಲಿ ತಟ್ಟೆ ಬಡಿಯುವ ಮೂಲಕ ವಿನೂತನವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಪಾವಗಡ ತಹಶಿಲ್ದಾರ್ ಕಚೇರಿಯಲ್ಲಿ ಬೇಡಿಕೆ ಈಡೇರಿಸುವಂತೆ ಅಂಗನವಾಡಿ ಬಿಸಿಯೂಟ, ಆಶಾ ಸಂಘಟನೆಗಳ ಪದಾಧಿಕಾರಿಗಳು ಖಾಲಿ ತಟ್ಟೆ ಬಡಿಯುವ ಮೂಲಕ ವಿನೂತನವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ಪಾವಗಡ: ಅಂಗನವಾಡಿ, ಬಿಸಿಯೂಟ, ಆಶಾ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಗ್ರೇಡ್- 2 ತಹಶೀಲ್ದಾರ್ ಸತ್ಯನಾರಾಯಣ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕೋವಿಡ್- 19 ಸಂದಿಗ್ಧ ಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈವರೆಗೆ ಯಾವುದೇ ಸುರಕ್ಷತಾ ಸವಲತ್ತುಗಳನ್ನು ಕೊಟ್ಟಿಲ್ಲ. ಕೊರೊನಾ ವಾರಿಯರ್ಸ್‌ಗೆ ಕೊಡುವ ಸವಲತ್ತು ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಮನೆ ಮನೆಗೆ ಆಹಾರ ವಿತರಣೆ ಮಾಡುತ್ತಿದ್ದೇವೆ. ಸ್ಯಾನಿಟೈಸರ್ ಮಾಸ್ಕ್ ಕೊಟ್ಟಿಲ್ಲ. ಮಕ್ಕಳನ್ನು ತೂಕ ಹಾಕುವಂತೆ ಸೂಚಿಸಲಾಗಿದೆ. ಆದರೆ, ಒಂದೇ ತೂಕದ ಯಂತ್ರದಲ್ಲಿ ಎಲ್ಲ ಮಕ್ಕಳನ್ನು ತೂಕ ಹಾಕಬೇಕಿದೆ. ಸ್ಯಾನಿಟೈಸ್ ಮಾಡಲು ಸ್ಯಾನಿಟೈಸರ್‌ ವಿತರಿಸಿಲ್ಲ. ರೆಡ್ ಜೋನ್ ಇರುವ ಕಡೆ ಸಮೀಕ್ಷೆಗೆ ನಿಯೋಜಿಸಲಾಗಿದೆ. ಆದರೆ, ಈವರೆಗೆ ವಿಶೇಷ ಸವಲತ್ತು, ಸುರಕ್ಷತಾ ಸಲಕರಣೆ ನೀಡದೆ ದುಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ADVERTISEMENT

ಕೊರೊನಾ ಸಮಸ್ಯೆಯಿಂದ ಊಟಕ್ಕೂ ಗತಿ ಇಲ್ಲದೆ ಪರದಾಡಿರುವ ಎಲ್ಲ ಕುಟುಂಬಗಳಿಗೆ ₹7.5 ಸಾವಿರ ನಿರ್ವಹಣಾ ವೆಚ್ಚ, ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ಕೊಡಬೇಕು. ಅಸಂಘಟಿತ ಕಾರ್ಮಿಕರಿಗೆ ಪಡಿತರ ಸಮರ್ಪಕವಾಗಿ ವಿತರಿಸಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹21 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷೆ ರಮೀಜಾ, ಕಾರ್ಯದರ್ಶಿ ಅಲುವೇಲಮ್ಮ, ಶಾರದಮ್ಮ, ರಮಾದೇವಿ, ಪ್ರಶಾಂತಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.