ADVERTISEMENT

ಸಂಸ್ಕೃತಿ ಮೇಲೆ ದಾಳಿ ಸಲ್ಲ

ಮಾಂಸ ಮಾರಾಟ ನಿಷೇಧಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 5:28 IST
Last Updated 15 ಏಪ್ರಿಲ್ 2021, 5:28 IST
ತುಮಕೂರಿನಲ್ಲಿ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು
ತುಮಕೂರಿನಲ್ಲಿ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು   

ತುಮಕೂರು: ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ಅಂಬೇಡ್ಕರ್ ಯುವಕರ ಸಂಘದಿಂದ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ ರಾಂ ಜಯಂತಿಯನ್ನು ಅರಿಳೀಮರದಪಾಳ್ಯ, ಮಾರಿಯಮ್ಮ ನಗರದಲ್ಲಿ ಆಯೋಜಿಸಲಾಗಿತ್ತು.

ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಚಿಂತಕ ಕೆ.ದೊರೈರಾಜ್, ‘ಯುಗಾದಿ ಹಬ್ಬದ ಸಮಯದಲ್ಲಿ ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ಮಾಂಸ ಮಾರಾಟದ ಮೇಲೆ ನಿಷೇಧ ಹೇರಿ ಬಹುಜನರ ಆಹಾರ ಸಂಸ್ಕೃತಿ ನಿಯಂತ್ರಿಸಲಾಗುತ್ತಿದೆ. ಇಂತಹ ಬಲಪಂಥೀಯ ಸಿದ್ಧಾಂತಗಳನ್ನುಅರ್ಥೈಸಿಕೊಂಡು ಯುವಜನರಿಗೆಮನದಟ್ಟು ಮಾಡಿಸಬೇಕು’ ಎಂದು ಸಲಹೆ ಮಾಡಿದರು.

ವಿಶ್ವದಲ್ಲಿ ಎಲ್ಲಾ ರಾಷ್ಟ್ರಗಳು ಅಂಬೇಡ್ಕರ್ ಜಯಂತಿಯನ್ನು ಜ್ಞಾನದ ದಿನವನ್ನಾಗಿ ಆಚರಿಸುತ್ತಿವೆ. ಕಳೆದ 20 ವರ್ಷಗಳ ಹಿಂದೆ ಜಯಂತಿ ಆಚರಿಸುವವರಿಗೆ ಅಡಚಣೆ ಮಾಡುವಂತಹ ವಾತಾವರಣ ಇತ್ತು. ಆದರೆ ಈಗ ಜನರೇ ಸ್ವಯಂ ಪ್ರೇರಿತರಾಗಿ ಅಂಬೇಡ್ಕರ್ ಹಬ್ಬ ಆಚರಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ನೆನಪಿಸಿಕೊಂಡರು.

ADVERTISEMENT

ಕೆಲವೊಂದು ಹಿತಾಸಕ್ತಿಗಳು ಅಂಬೇಡ್ಕರ್ ಜಯಂತಿಯನ್ನು ವೈಭವೀಕರಿಸುವ ವ್ಯವಸ್ಥೆ ಸೃಷ್ಟಿಸಿ ನಾವು ಮೈಮರೆಯುವಂತೆ ಮಾಡುತ್ತಿವೆ. ಈ ಬಗ್ಗೆ ಎಚ್ಚರವಾಗಿರಬೇಕು. ಭಾರತದಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಒಗ್ಗೂಡುವ ಸ್ಥಿತಿ ಇಲ್ಲವಾಗಿದೆ. ಧರ್ಮ, ಜಾತಿ, ಲಿಂಗ, ಆರ್ಥಿಕ ಅಸಮಾನತೆಗಳು ಸೃಷ್ಟಿಯಾಗಿ ಸೌಹಾರ್ದ ವಾತಾವರಣ ಹದಗೆಟ್ಟಿದೆ. ಈ ಹಿಂದಿನ ಸಾಮಾಜಿಕ ಸ್ಥಿತಿಗತಿಗೆ ಕೊಂಡೊಯ್ಯುವಂತಹ ಆಡಳಿತ ನಮ್ಮ ದೇಶದಲ್ಲಿದೆ ಎಂದು ಎಚ್ಚರಿಸಿದರು.

ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, ‘ಮುಂದಿನ ದಿನಗಳಲ್ಲಿ ಮಾನವ ಸಮಾಜ ನಿರ್ಮಾಣಕ್ಕೆ ಈ ದಿನವನ್ನು ಕೇಂದ್ರವಾಗಿ ಇಟ್ಟುಕೊಳ್ಳಬೇಕು’ ಎಂದರು.

ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮಿನರಸಿಂಹರಾಜು, ರಾಜ್ಯ ಕನಕ ಪತ್ತಿನ ಸಹಕಾರ ಸಂಘದ ಪುಟ್ಟರಾಜು, ಮುಖಂಡರಾದ ಜಿ.ಎಸ್.ಸಿದ್ದರಾಮಯ್ಯ, ಕೃಷ್ಣಮೂರ್ತಿ, ರಂಗನಾಥ್, ಅರುಣ್, ಶಂಕರಯ್ಯ, ರಂಗನಾಥ್, ಕಿರಣ್, ರಂಗನಾಥ್, ಕಣ್ಣನ್, ಕೃಷ್ಣ, ಮುರುಗನ್, ಚಕ್ರಪಾಣಿ, ಮಾದವನ್, ಕಾಶಿ, ಗೋವಿಂದಸ್ವಾಮಿ, ಮನುಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.