ADVERTISEMENT

ಅಂಕಸಂದ್ರ ಕಿರು ಜಲಾಶಯಕ್ಕೆ ಬಾಗಿನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 8:19 IST
Last Updated 5 ಜನವರಿ 2021, 8:19 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಂಕಸಂದ್ರ ಕಿರು ಜಲಾಶಯಕ್ಕೆ ಹೇಮಾವತಿ ನೀರು ಹರಿದು ಕೋಡಿ ಬೀಳುತ್ತಿದ್ದು ತಾಲ್ಲೂಕು ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿಯಿಂದ ಬಾಗಿನ ಅರ್ಪಿಸಲಾಯಿತು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಂಕಸಂದ್ರ ಕಿರು ಜಲಾಶಯಕ್ಕೆ ಹೇಮಾವತಿ ನೀರು ಹರಿದು ಕೋಡಿ ಬೀಳುತ್ತಿದ್ದು ತಾಲ್ಲೂಕು ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿಯಿಂದ ಬಾಗಿನ ಅರ್ಪಿಸಲಾಯಿತು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಅಂಕಸಂದ್ರ ಅಣೆಯಲ್ಲಿ ಹೇಮಾವತಿ ನೀರು ಹರಿದು ಕೋಡಿ ಬೀಳುತ್ತಿದ್ದು ತಾಲ್ಲೂಕು ಶಾಶ್ವತ ಕುಡಿಯುವ ನೀರಾವರಿ ಹೋರಾಟ ಸಮಿತಿಯಿಂದ ಬಾಗಿನ ಅರ್ಪಿಸಲಾಯಿತು.

ತಾಲ್ಲೂಕಿನಲ್ಲಿ ಹೇಮಾವತಿ ನೀರು ಚಾನೆಲ್ ಮೂಲಕ ಹರಿದು ಸಾಸಲು ಕೆರೆ, ಶೆಟ್ಟಿಕೆರೆ ಕೆರೆ ತುಂಬಿ ಈಗ ಅಂಕಸಂದ್ರ ಕಿರು ಜಲಾಶಯ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ನೀರಿಗಾಗಿ ಹೋರಾಟ ಮಾಡಿದ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿಯು ಅಂಕಸಂದ್ರ ಕಿರು ಜಲಾಶಯಕ್ಕೆ ಭೇಟಿ ನೀಡಿತ್ತು.

ಕುಪ್ಪೂರು ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹರಿಯುತ್ತಿರುವ ನೀರಿಗೆ ಬಾಗಿನ ಅರ್ಪಿಸಿದರು

ADVERTISEMENT

ಬಳಿಕ ಮಾತನಾಡಿದ ಅವರು, ಎಲ್ಲಾ ಸಂಘ-ಸಂಸ್ಥೆಗಳು ಜಾತಿ, ಮತ, ಪಂಥಗಳನ್ನು ಮರೆತು ಹೇಮಾವತಿ ನೀರು ತರಲು ಹೋರಾಡಿದ್ದಾರೆ. ಬಯಲಪ್ಪನ ಮಠದ ಮುಸ್ಲಿಂ ಗುರುಗಳು ಸಹ ಹೋರಾಟ ಬೆಂಬಲಿಸಿದ್ದರು. ಆಗಿನ ಕಾಲದಲ್ಲಿ ಕಿರಣ್ ಕುಮಾರ್, ಸಿ.ಬಿ. ಸುರೇಶ್ ಬಾಬು ಸಹ ಸಹಕರಿಸಿದ್ದರು. ಚಿಕ್ಕನಾಯಕನಹಳ್ಳಿಯಿಂದ ಕೆ.ಬಿ. ಕ್ರಾಸ್‌ಗೆ ಪಾದಯಾತ್ರೆ ಮಾಡುವ ಸಮಯದಲ್ಲಿ ಜೆ.ಸಿ. ಮಾಧುಸ್ವಾಮಿ ಸಹ ಬೆಂಬಲಿಸಿದ್ದರು ಎಂದರು.

ನಂತರ ನಾಲಾ ಕೆಲಸ ನನೆಗುದಿಗೆಗೆ ಬಿದ್ದಿದ್ದನ್ನು ಗಮನಿಸಿದ ಅವರು, ಗೆದ್ದ ಮೇಲೆ ಪ್ರಥಮ ಆದ್ಯತೆ ನೀಡಿ ಹೇಮಾವತಿ ಕೈಗೆತ್ತುಕೊಂಡರು. ಸಚಿವ ಜೆ.ಸಿ.ಎಂ. ಅವರು ನನ್ನ ಕಾಲಾವಧಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವುದೇ ನನ್ನ ಗುರಿ ಎಂದು ತಿಳಿಸಿರುವುದಾಗಿ ಹೇಳಿದರು.

ಶಾಶ್ವತ ಕುಡಿಯುವ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಎಸ್.ಜಿ. ಪರಮೇಶ್ವರ್ ಮಾತನಾಡಿ, ಹುಳಿಯಾರಿನಲ್ಲಿ 64 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಯಿತು. ಎಲ್ಲರ ಹೋರಾಟದ ಫಲ, ಶ್ರಮದಿಂದ ಹೇಮಾವತಿ ನೀರು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹರಿದಿದೆ. ಸಚಿವರಾದ ನಂತರ ಮಾಧುಸ್ವಾಮಿ ಅವರು ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ಹೆಚ್ಚು ಶ್ರಮ ವಹಿಸಿದರು ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಕೆ.ಜಿ. ಕೃಷ್ಣೆಗೌಡ, ಕರವೇ ಗುರುಮೂರ್ತಿ, ಡಿಎಸ್ಎಸ್ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ, ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.