ADVERTISEMENT

ಬಾರ್‌ನಿಂದ ಅಪಘಾತ ಹೆಚ್ಚಳ: ಸ್ಥಗಿತಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 7:30 IST
Last Updated 18 ಜುಲೈ 2019, 7:30 IST
ರಾಮಗೊಂಡನಹಳ್ಳಿ ಗೇಟ್ ಬಳಿ ಇರುವ ಮದ್ಯದಂಗಡಿ ಬಳಿ ಕುಡುಕರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಿರುವುದು
ರಾಮಗೊಂಡನಹಳ್ಳಿ ಗೇಟ್ ಬಳಿ ಇರುವ ಮದ್ಯದಂಗಡಿ ಬಳಿ ಕುಡುಕರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಿರುವುದು   

ಕೋರ: ಹೋಬಳಿಗೆ ಸಮೀಪವಿರುವ ರಾಮಗೊಂಡನಹಳ್ಳಿ ಗೇಟ್ ಬಳಿ ಇರುವ ಬಾರ್‌ನಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಸ್ಥಗಿತಗೊಳಿಸುವಂತೆ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ರಾಮಗೊಂಡನಹಳ್ಳಿ ಗೇಟ್ ಬಳಿ ಇರುವ ಖಾಸಗಿ ಬಾರ್ ಬಳಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ಕಿರಿಕಿರಿಯಾಗುತ್ತಿದೆ. ಕುಡಿದು ಅಡ್ಡಾದಿಡ್ಡಿ ಸಂಚರಿಸುವುದರಿಂದ ಈ ಮಾರ್ಗದಲ್ಲಿ ಹಲವು ಅಪಘಾತಗಳಾಗಿವೆ. ಜುಲೈ 15ರಂದು ಚಿಕ್ಕತೊಟ್ಲುಕೆರೆ ತಿರುವಿನಲ್ಲಿ ಅಪಘಾತವಾಗಿ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಘಟನೆಗೂ ಮೊದಲು ರಸ್ತೆಯಲ್ಲಿ ಹಲವು ಅಪಘಾತಗಳಾಗಿ ಕೈಕಾಲು ಮುರಿದುಕೊಂಡಿರುವ ಪ್ರಕರಣ ನಡೆದಿವೆ. ರಾತ್ರಿ ವೇಳೆ ಬಾರ್‌ನ ಮುಖ್ಯದ್ವಾರ ಮುಚ್ಚಿದ್ದರೂ ರಾತ್ರಿ ಒಂದು ಗಂಟೆವರೆಗೂ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿರುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಈ ಬಾರ್ ಆರಂಭವಾದಾಗಿನಿಂದ ಸಾರ್ವಜನಿಕರಿಂದ ತೀವ್ರ ಅಪಸ್ವರ ಕೇಳಿ ಬರುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನ ಹುಟ್ಟುಹಾಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.