ತುಮಕೂರು: ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಕಣಗಳಲ್ಲೊಂದಾದ ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಬಿಜೆಪಿ ಹಿರಿಯ ಮುಖಂಡ ಜಿ.ಎಸ್. ಬಸವರಾಜ್ ಅವರಲ್ಲಿ ಯಾರು ಗೆಲ್ಲಬಲ್ಲರು ಎಂಬ ಬಗ್ಗೆ ಬೆಟ್ಟಿಂಗ್ ಚಟುವಟಿಕೆ ತೆರೆಮರೆಯಲ್ಲಿ ಶುರುವಾಗಿದ್ದು, ಬೆಟ್ಟಿಂಗ್ ಬಾಜಿರಾಯರೂ ತಮ್ಮದೇ ಆದ ಜಾಲಗಳಲ್ಲಿ ಸಕ್ರಿಯರಾಗುತ್ತಿದ್ದಾರೆ ಎನ್ನಲಾಗಿದೆ.
ಈ ಸುಳಿವು ಅರಿತಿರುವ ಪೊಲೀಸ್ ಇಲಾಖೆ ಇದಕ್ಕೆ ಸಂಬಂಧಪಟ್ಟ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಿಂದೆ ಬೆಟ್ಟಿಂಗ್ ಆಡಿ ಸಿಕ್ಕಿ ಬಿದ್ದವರು, ಚುನಾವಣೆಯಲ್ಲಿ ಮಾತ್ರವೇ ಲಕ್ಷ ಲಕ್ಷ ಹಣ, ಆಸ್ತಿ ಪಣಕ್ಕಿಟ್ಟವರ ಪಟ್ಟಿಯನ್ನು ಗಮನಿಸುತ್ತಿದೆಯಂತೆ ಎಂದು ತಿಳಿದಿದೆ.
ಕಟ್ಟೆಚ್ಚರ ವಹಿಸಿದ್ದೇವೆ: ‘ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆಗಳ ಮೇಲೆ ನೀತಿ ಸಂಹಿತೆ ಜಾರಿಯಾದಾಗಿನಿಂದಲೂ ಕಟ್ಟೆಚ್ಚರವಹಿಸಿದ್ದೇವೆ. ಮತದಾನ ಬಳಿಕ ಫಲಿತಾಂಶದ ಮೇಲೆ ಬೆಟ್ಟಿಂಗ್ ವ್ಯವಹಾರ ನಡೆಯುತ್ತದೆ ಎಂಬ ಸುಳಿವಿನ ಮೇಲೆ ಹೆಚ್ಚಿನ ನಿಗಾವಹಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಲ್ಲೆಡೆ ನಮ್ಮ ಅಧಿಕಾರಿಗಳು, ಸಿಬ್ಬಂದಿ ಗಮನಿಸುತ್ತಿದ್ದಾರೆ. ಯಾವುದೇ ರೀತಿ ಬೆಟ್ಟಿಂಗ್ ನಡೆಯುತ್ತಿರುವುದು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರೂ ಇಂತಹ ಅಕ್ರಮ ಕಂಡು ಬಂದಲ್ಲಿ ಇಲಾಖೆ ಗಮನಕ್ಕೆ ತಂದು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.