ತುಮಕೂರು: ಮಾಜಿ ಸಚಿವ ಟಿ.ಬಿ.ಜಯಚಂದ್ರ ‘ಮೋದಿಯನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ’ ಎಂದು ನೀಡಿರುವ ಹೇಳಿಕೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಟೌನ್ಹಾಲ್ ವೃತ್ತದಲ್ಲಿ ಶನಿವಾರ ಪ್ರತಿಭಟಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಮುಖಕ್ಕೆ ಪ್ರಧಾನಿ ಮುಖವಾಡ ಧರಿಸಿದ್ದರು. ಜಯಚಂದ್ರ ವಿರುದ್ಧ ಘೋಷಣೆ ಕೂಗಿದರು.
‘ದೇಶದ ಆರ್ಥಿಕ ವ್ಯವಸ್ಥೆ ಹತೋಟಿಗೆ ತೆಗೆದುಕೊಳ್ಳಲು ನೋಟು ಅಮಾನ್ಯೀಕರಣ ಮಾಡಲಾಗಿದೆ. ಇದರಿಂದ ಇಂದು ಕಪ್ಪುಹಣ, ನಕಲಿ ನೋಟುಗಳ ನಿಯಂತ್ರಣವಾಗಿದೆ. ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ಹೇಳಿದರು.
ಈ ಯೋಜನೆಯ ಬಗ್ಗೆ ಅರಿಯದ ಜಯಚಂದ್ರ ಅವರು ಪ್ರಧಾನ ಮಂತ್ರಿ ಅವರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಮೊದಲು ಅವರು ಅರ್ಥಶಾಸ್ತ್ರ ಓದಿಕೊಳ್ಳಬೇಕಾಗಿದೆ. ಈ ರೀತಿ ಮಾತನಾಡುವ ಮೂಲಕ ಅವರ ಮಾನ ಮರ್ಯಾದೆಯನ್ನು ಅವರೇ ಹರಾಜು ಹಾಕಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.
ಕೂಡಲೇ ಜಯಚಂದ್ರ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಮಹಾನಗರಪಾಲಿಕೆ ಸದಸ್ಯರಾದ ಗಿರಿಜಾ ಧನಿಯಾ ಕುಮಾರ್, ಮಲ್ಲಿಕಾರ್ಜುನಯ್ಯ, ಬಿ.ಜಿ.ಕೃಷ್ಣಪ್ಪ, ಮಂಜುನಾಥ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವೀಶ್, ಕಾರ್ಮಿಕ ಪ್ರಕೋಷ್ಠ ಸಂಚಾಲಕ ಕೊಪ್ಪಳ್ ನಾಗರಾಜ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಚ್. ಹನುಮಂತರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.