ADVERTISEMENT

ಎಡೆಯೂರು: ಶಾಸಕ ರಂಗನಾಥ್ ಮೇಲೆ ಸಿಟ್ಟಾದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 6:05 IST
Last Updated 18 ಅಕ್ಟೋಬರ್ 2019, 6:05 IST
ಎಡೆಯೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಸಂದರ್ಭದಲ್ಲಿ ವಿವಿಧ ಮಠಗಳ ಮಠಾಧೀಶರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಎಡೆಯೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಸಂದರ್ಭದಲ್ಲಿ ವಿವಿಧ ಮಠಗಳ ಮಠಾಧೀಶರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ   

ತುಮಕೂರು: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು ಕುಣಿಗಲ್ ತಾಲ್ಲೂಕಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ₹720 ಕೋಟಿ ಅನುಮೋದನೆ ನೀಡಿದ್ದರೂ ತಡೆ ಹಿಡಿಯಲಾಗಿದೆ. ಯಾವ ಕಾರಣಕ್ಕೆ ತಡೆ ಹಿಡಿಯಲಾಗಿದೆ ಎಂಬುದು ಗೊತ್ತಿಲ್ಲ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಹೇಳಿದ ಮಾತಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಟ್ಟಾದರು.

ಎಡೆಯೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡುತ್ತಿದ್ದರು.

'ಎಡೆಯೂರು ನಿಮ್ಮ ಮನೆ ದೇವರು. ಆ ದೇವರು ಇರುವ ಕ್ಷೇತ್ರ ಕುಣಿಗಲ್ ತಾಲ್ಲೂಕು. ಈ ತಾಲ್ಲೂಕಿಗೆ ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯ ಆಗುತ್ತಿದೆ. ಎಕ್ಸಪ್ರೆಸ್ ಕೆನಾಲ್ ಯೋಜನೆ ರದ್ದುಪಡಿಸಲಾಗಿದೆ. 25 ವರ್ಷಗಳಿಂದ ನೀರಾವರಿ ವಿಚಾರದಲ್ಲಿ ತಾಲ್ಲೂಕಿಗೆ ಅನ್ಯಾಯ ಆಗಿದೆ' ಎಂದು ಶಾಸಕರು ಹೇಳಿದರು.

ADVERTISEMENT

ಶಾಸಕರು ಇದೇ ರೀತಿ ಮಾತು ಮುಂದುವರಿಸಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ಸಿಟ್ಟಾದರು. 'ಆಯ್ತು ರೀ. ಸಾಕು ಮುಗಿಸ್ರಿ' ಎಂದು ಶಾಸಕರತ್ತ ಕೈ ಮಾಡಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಂಗನಾಥ್ ಆಯ್ತು ಸರ್. ಐದು ನಿಮಿಷ ಮಾತಾಡಿ ಮುಗಿಸ್ತೇನೆ ಎಂದರು.

ಬಳಿಕ ಮಾತಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, 'ರಾಜ್ಯದ ಹಣಕಾದಿನ ಸ್ಥಿತಿ ಹೇಗಿದೆ ಎಂಬುದು ಮುಖ್ಯಮಂತ್ರಿಯಾದ ನನಗೊಬ್ಬನಿಗೇ ಗೊತ್ತು. ನೀರಿನ ವಿಚಾರದಲ್ಲಿ ಅನ್ಯಾಯ ಮಾಡುವ ವ್ಯಕ್ತಿ ನಾನಲ್ಲ. ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಭವಿಷ್ಯದಲ್ಲಿ ನೀರಾವರಿಗೆ, ಅಭಿವೃದ್ಧಿ ಯೋಜನೆಗೆ ಹಣಕಾಸಿನ ವ್ಯವಸ್ಥೆ ಮಾಡಿಕೊಡಲಾಗುವುದು’ಎಂದು ಹೇಳಿದರು.

ಹಿಂದಿನ ಸರ್ಕಾರವು ರಾಜ್ಯದ ಹಣಕಾಸಿನ ಲಭ್ಯತೆಯ ಸ್ಥಿತಿ ಅರಿಯದೇ ಅಭಿವೃದ್ಧಿ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರವು ಇನ್ನೂ ಐದಾರು ವರ್ಷ ಹಣ ಕೂಡಿಟ್ಟರೂ ಆ ಯೋಜನೆಗಳು ಪೂರ್ಣಗೊಳ್ಳುವುದು ಕಷ್ಟ ಎಂದರು.

ಅತಿವೃಷ್ಟಿಗೆ ಒತ್ತು: ಅತಿವೃಷ್ಟಿ ಪ್ರದೇಶದಲ್ಲಿ ಪರಿಹಾರ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಬೇರೆ ಯೋಜನೆಗಳಿಗೆ ಸದ್ಯಕ್ಕೆ ಹಣ ಪೂರ್ಣ ಪ್ರಮಾಣದಲ್ಲಿ ಒದಗಿಸಲು ಆಗುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.