ADVERTISEMENT

ನಂದಿನಿ ಉತ್ಪನ್ನ ಖರೀದಿಸಿ

ವಿಶ್ವ ಕ್ಷೀರ ದಿನಾಚರಣೆಯಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 15:47 IST
Last Updated 2 ಜೂನ್ 2019, 15:47 IST
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಾಯಿತು   

ತುಮಕೂರು: ‘ಗುಣಮಟ್ಟ ಕಾಯ್ದುಕೊಂಡು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿರುವ ಕೆಎಂಎಫ್‌ನ ನಂದಿನಿ ಉತ್ಪನ್ನಗಳನ್ನು ಗ್ರಾಹಕರು ಖರೀದಿಸಬೇಕು’ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದರು.

ತುಮಕೂರು ಹಾಲು ಒಕ್ಕೂಟ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ‘ವಿಶ್ವ ಹಾಲು ದಿನಾಚರಣೆ’ಯಲ್ಲಿ ಮಾತನಾಡಿದರು.

‘ವಿಶ್ವದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ದೇಶದಲ್ಲಿ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಮುಲ್ ಬ್ರಾಂಡ್‌ ನಂತರದ ಸ್ಥಾನವನ್ನು ನಂದಿನಿ ಪಡೆದಿದೆ. ಇದಕ್ಕೆ ಉತ್ತಮ ಗುಣಮಟ್ಟದ ನಂದಿನಿ ಉತ್ಪನ್ನಗಳೇ ಕಾರಣ’ ಎಂದರು.

ADVERTISEMENT

‘ಹಾಲು ಮತ್ತು ಅದರ ಉತ್ಪನ್ನಗಳ ಮಹತ್ವವನ್ನು ಜನರಿಗೆ ತಿಳಿಸಲು 2001ರಿಂದಲೂ ಈ ದಿನಾಚರಣೆ ಆಚರಿಸುತ್ತಿದ್ದೇವೆ. ಸಹಕಾರಿ ಕ್ಷೇತ್ರದ ನಂದಿನಿ ಹಾಲಿನ ಜತೆಗೆ, ಖಾಸಗಿ ಕಂಪನಿಗಳ ಹಲವು ಹಾಲಿನ ಬ್ರಾಂಡ್‌ಗಳ ನಡುವೆ ಪೈಪೋಟಿ ಇದೆ. ಕೆಲವರು ಹಾಲನ್ನು ಗಟ್ಟಿಗೊಳಿಸಲು ಯೂರಿಯಾ, ಸಿಹಿಗೆಣಸು ಇನ್ನಿತರ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ’ ಎಂದು ಹೇಳಿದರು.

‘ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿಯ ಮಕ್ಕಳಿಂದ 10ನೇ ತರಗತಿಯ ಮಕ್ಕಳವರೆಗೆ ನಂದಿನಿ ಹಾಲು ವಿತರಿಸಲಾಗುತ್ತಿದೆ. ಆಂಧ್ರಪ್ರದೇಶ, ಜಮ್ಮು–ಕಾಶ್ಮೀರ ಸರ್ಕಾರದೊಂದಿಗೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ರೈತರು ಮತ್ತು ಒಕ್ಕೂಟಕ್ಕೆ ಅನುಕೂಲ ಆಗುತ್ತಿದೆ’ ಎಂದು ತಿಳಿಸಿದರು.

ಹಾಲು ಒಕ್ಕೂಟದ ನಿರ್ದೇಶಕರಾದ ಚಂದ್ರಶೇಖರ್, ಚನ್ನಮಲ್ಲಯ್ಯ, ಈಶ್ವರಯ್ಯ, ಅಬ್ದುಲ್ ರಜಾಕ್, ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕ ಶ್ರೀನಿವಾಸ್, ಕೃಷ್ಣಾ ನಾಯಕ್, ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವೇದಿಕೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.