ತುಮಕೂರು: ಅರಣ್ಯನಾಶ, ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗಿದ್ದರಿಂದ ಜಾಗತಿಕ ತಾಪಮಾನ ಬದಲಾವಣೆಯಾಗಿ ವಾಯುಗುಣದಲ್ಲಿ ಏರುಪೇರಾಗುತ್ತಿದೆ ಎಂದು ಜನ ವಿಜ್ಞಾನ ಚಳವಳಿಯ ನೇತಾರ ಡಾ.ಎಚ್.ಎಸ್.ನಿರಂಜನ ಆರಾಧ್ಯ ತಿಳಿಸಿದರು.
ನಗರದ ವಿಜ್ಞಾನ ಕೇಂದ್ರದಲ್ಲಿ ನಡೆದ 34 ನೇ ಬೇಸಿಗೆ ವಿಜ್ಞಾನ ಶಿಬಿರ ಹಾಗೂ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಜೀವಿ ಹಸಿರಿಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭೂಮಿಯ ಹಸಿರನ್ನು ಅವಲಂಬಿಸಿದ್ದೇವೆ. ಹಾಗಾಗಿ ಭೂಮಿಯ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರಶ್ನಿಸದೆ ಯಾವುದನ್ನು ಒಪ್ಪಬಾರದು ಶಿಬಿರದಲ್ಲಿ ನಿಮ್ಮ ಎಲ್ಲಾ ಅನುಮಾನಗಳನ್ನು ಪ್ರಶ್ನಿಸಿ ಉತ್ತರವನ್ನು ಕಂಡುಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಜಿ.ವಿ.ಆನಂದ ಮೂರ್ತಿ ಮಾತನಾಡಿ, ‘ಯಾವುದೇ ಒತ್ತಡವಿಲ್ಲದೆ ಸಂತಸದಿಂದ ಕಲಿಯಲು ಬೇಸಿಗೆ ವಿಜ್ಞಾನ ಶಿಬಿರವು ಸಹಕಾರಿಯಾಗಿರುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ನೀರಿನ ಸದ್ಭಳಕೆ ಮಾಡಿಕೊಳ್ಳಬೇಕು. ಹಾಗೇ ಪ್ರಕೃತಿ ನಿಯಮಗಳನ್ನು ಪಾಲಿಸಿ ಭೂಮಿಯ ಸ್ವಾಸ್ಥ್ಯವನ್ನು ಕಾಪಾಡಿ’ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಎಸ್.ಕುಮಾರಸ್ವಾಮಿ, ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಬಿ.ಮರುಳಯ್ಯ ಅವರು ಶಿಬಿರಾರ್ಥಿಗಳಲ್ಲಿ ಭೂಮಿಯ ಸಂರಂಕ್ಷಣೆಯ ಯೋಜನೆಯ ಬಗ್ಗೆ ಅರಿವು ಮೂಡಿಸಿದರು.
ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್, ಪರಿಸರ ಶಿಕ್ಷಣ ಕೇಂದ್ರದ ಯೋಜನಾಧಿಕಾರಿ ಎಸ್.ರವಿಶಂಕರ್, ವಿಜ್ಞಾನ ಕೇಂದ್ರದ ಖಜಾಂಚಿ ಟಿ.ಜಿ.ಶಿವಲಿಂಗಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.