ತುಮಕೂರು: ಡ್ರಾಪ್ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಿಪಟೂರು ನಗರದ ಪೇಂಟಿಂಗ್ ಕೆಲಸ ಮಾಡುವ ಮಂಜ (24), ನಗರದ ಕ್ಯಾತ್ಸಂದ್ರ ಶಾಂತಮ್ಮ (32) ಬಂಧಿತ ಆರೋಪಿಗಳು.
ಅ. 13ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಎಂ.ಎಲ್.ಮಧು ಎಂಬುವರು ನಗರದ ಶಿರಾಗೇಟ್ ಕಡೆಗೆ ತೆರಳುತ್ತಿದ್ದಾಗ ಕೋಡಿ ಬಸವಣ್ಣ ದೇವಸ್ಥಾನದ ಕೆರೆ ಏರಿಯ ನಾಗರಕಲ್ಲು ಮುಂಭಾಗ ನಿಂತಿದ್ದ ಶಾಂತಮ್ಮ ಬೈಕ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಶಿರಾ ಗೇಟ್ಗೆ ಡ್ರಾಪ್ ಕೋಡುವಂತೆ ಕೋರಿದ್ದು, ಅದರಂತೆ ಬೈಕ್ನಲ್ಲಿ ಹತ್ತಿಸಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಮಂಜ ಗಲಾಟೆ ಮಾಡಿದ್ದಾರೆ.
ಶಾಂತಮ್ಮ, ಮಂಜ ಸೇರಿಕೊಂಡು ಗಲಾಟೆಮಾಡಿ, ಬೆದರಿಸಿ ಮಧು ಬಳಿ ಇದ್ದ ₹1,800 ನಗದು ಹಾಗೂ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದ್ದರು. ನಗರ ಠಾಣೆ ಸಿಪಿಐ ಬಿ.ನವೀನ್ ಉಸ್ತುವಾರಿಯಲ್ಲಿ ಪಿಎಸ್ಐ ಮಂಜುನಾಥ, ಗಂಗಮ್ಮ ನೇತೃತ್ವದ ತಂಡ ರಚಿಸಲಾಗಿತ್ತು.
ದ್ವಿಚಕ್ರ ವಾಹನದಿಂದ ಬಿದ್ದು ಸವಾರ ಸಾವು
ಪಾವಗಡ: ತಾಲ್ಲೂಕಿನ ಹಿಂದೂಪುರ ರಸ್ತೆ ಕಣಿವೇನಹಳ್ಳಿ ಗೇಟ್ ಬಳಿ ದ್ವಿಚಕ್ರ ವಾಹನದಿಂದ ಬಿದ್ದು ಪಟ್ಟಣದ ಶಾಂತಿ ನಗರದ ಅನಿಲ್ (30) ಮೃತಪಟ್ಟಿದ್ದಾರೆ.
ಸೋಮವಾರ ಐವಾರ್ಲಹಳ್ಳಿ ಯಿಂದ ಪಟ್ಟಣಕ್ಕೆ ಬರುವಾಗ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಿನ್ನಾಭರಣ ಕಳವು
ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕಡೇಹಳ್ಳಿ ಗ್ರಾಮದ ನಂಜಪ್ಪ ಅವರ ಮನೆಗೆ ನುಗ್ಗಿ ಕಳ್ಳರು ಲಕ್ಷಾಂತರ ರೂಪಾಯಿ ಚಿನ್ನಾಭರಣ ಹಾಗೂ ನಗದು ಕದ್ದಿದ್ದಾರೆ.
ನಂಜಪ್ಪ ಮನೆಯವರು ತೋಟಕ್ಕೆ ತೆರಳಿದ ವೇಳೆ ಕಳ್ಳರು ಮನೆ ಬೀಗ ಮುರಿದು ಮನೆಯ ಬೀರುವಿನಲ್ಲಿದ್ದ 28 ಗ್ರಾಂ ಸರ ಹಾಗೂ ₹ 50 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.