ತೋವಿನಕೆರೆ (ಕೊರಟಗೆರೆ): ಸಿದ್ಧರಬೆಟ್ಟದ ದಾಸೋಹ ಕೊಠಡಿಯಲ್ಲಿ ಸಿದ್ಧೇಶ್ವರ ಸೇವಾ ಸಮಿತಿಯವರು ಹಾಕಿಸಿದ್ದ ಕೆಲವು ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಪ್ಲಾಸ್ಟಿಕ್ ಮತ್ತು ಕಾಗದ ಲೋಟದಿಂದ ಮುಚ್ಚಿರುವುದು ಕಂಡು ಬಂದಿದೆ.
ಸಿದ್ಧರಬೆಟ್ಟಕ್ಕೆ ಪ್ರತಿ ಸೋಮವಾರ ಸಾವಿರಾರು ಭಕ್ತರು ಬಂದು ದಾಸೋಹ ಕೊಠಡಿಯಲ್ಲಿ ಊಟ ಮಾಡುತ್ತಾರೆ. ದಾಸೋಹದ ಒಳಭಾಗದಲ್ಲಿ ನಾಲ್ಕು, ಪ್ರವೇಶ ದ್ವಾರದಲ್ಲಿ ಒಂದು ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಹಿಂದೆ ಆಡಳಿತ ನಡೆಸುತ್ತಿದ್ದ ಸಿದ್ಧೇಶ್ವರ ಸೇವಾ ಸಮಿತಿಯವರು ಅಳವಡಿಸಿದ್ದರು.
ಕೆಲವರು ಇದರ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದರು. ಸಿದ್ಧೇಶ್ವರ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಬೆಂಡೋಣೆ ಜಯರಾಂ ಈ ವಿಷಯವನ್ನು ದಾಸೋಹ ವಶಕ್ಕೆ ಪಡೆಯುವ ದಿನವೇ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿದ ನಂತರ ಸೇವಾ ಸಮಿತಿಯಲ್ಲಿ ತಪ್ಪುಗಳನ್ನು ಹುಡುಕುವ ಕೆಲಸ ಪ್ರಾರಂಭವಾಯಿತು’ ಎಂದು ನೋವಿನಿಂದ ಕಣ್ಣೀರು ಹಾಕಿದ್ದರು.
ಸಿದ್ಧೇಶ್ವರ ಸೇವಾ ಸಮಿತಿಯಿಂದ ಮುಜರಾಯಿ ಇಲಾಖೆಯವರು ದಾಸೋಹವನ್ನು ವಶಕ್ಕೆ ಪಡೆದ ನಂತರ ಸಿಸಿಟಿವಿಗಳನ್ನು ಮುಚ್ಚಿಸಿರುವುದು ಸಂಶಯಕ್ಕೆ ಕಾರಣವಾಗಿದೆ.
ಮುಜರಾಯಿ ಇಲಾಖೆಯವರು ಸೇವಾ ಸಮಿತಿಯಿಂದ ದಾಸೋಹವನ್ನು ಮಾತ್ರ ವಶಕ್ಕೆ ಪಡೆದಿದ್ದು ಕಚೇರಿಗೆ ಬೀಗ ಹಾಕಿ ಮೊಹರು (ಸೀಲ್) ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.