
ತುಮಕೂರು: ಕೇಂದ್ರ ಸರ್ಕಾರ ನರೇಗಾ ಕಾಯ್ದೆ ನಿಷ್ಕ್ರಿಯಗೊಳಿಸಿ, ಕಾರ್ಪೊರೇಟ್ ಸಂಸ್ಕೃತಿಗೆ ಬೆಂಬಲ ನೀಡುವ ಗುತ್ತಿಗೆ ಆಧಾರಿತ ವಿಬಿ ಜಿ-ರಾಮ್–ಜಿ ಮಸೂದೆ ಜಾರಿಗೆ ಮುಂದಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನರೇಗಾ ಯೋಜನೆ, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಇದುವರೆಗೆ ಗೆಲುವು ಸಾಧಿಸಿಲ್ಲ. ಈ ಬಾರಿ ಇತಿಹಾಸ ಬದಲಾಗಬೇಕು. ಮುಖಂಡರು, ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ‘ಜಿಲ್ಲಾ ಕ್ರೀಡಾಂಗಣದ ಹೆಸರು ಬದಲಾಯಿಸಿಲ್ಲ. ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಪರಮೇಶ್ವರ ಹೆಸರು ಇಡಲಾಗಿದೆ. ಪರಮೇಶ್ವರ ಕ್ರೀಡಾಪಟುವಾಗಿದ್ದು, ಇಂದಿಗೂ ತಮ್ಮ ಹೆಸರಿನಲ್ಲಿ ಅಳಿಸಲಾಗದ ದಾಖಲೆ ಇದೆ. ಬಿಜೆಪಿ ಕ್ಷುಲ್ಲಕ ರಾಜಕಾರಣಕ್ಕೆ ಇದನ್ನು ವಿರೋಧಿಸುತ್ತಿದೆ’ ಎಂದು ಟೀಕಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಮಾಜಿ ಶಾಸಕರಾದ ಎಸ್.ಷಫಿ ಅಹ್ಮದ್, ಕೆ.ಎಸ್.ಕಿರಣಕುಮಾಣ್, ರಫೀಕ್ ಅಹ್ಮದ್, ಆಗ್ನೇಯ ಪದವೀಧರರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್, ಮುಖಂಡರಾದ ಕೆಂಚಮಾರಯ್ಯ, ಇಕ್ಬಾಲ್ ಅಹ್ಮದ್, ಸೂರ್ಯ ಮುಕುಂದರಾಜ್, ಫೈಯಾಜ್, ಮಹೇಶ್, ನಯಾಜ್ ಅಹ್ಮದ್, ಅನಿಲ್, ರಾಮಕೃಷ್ಣ, ರೇವಣಸಿದ್ದಯ್ಯ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.