ಚಿಕ್ಕನಾಯಕನಹಳ್ಳಿ: ಶೆಟ್ಟಿಕೆರೆ ಗ್ರಾಮದಲ್ಲಿ ವಾಸವಿರುವ ಕೂಲಿಗಾರ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ (ರೈತ) ಸಂಘದ ಅಧ್ಯಕ್ಷ ಎಚ್.ಆರ್ ಬೋಜರಾಜು ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಅಂಚೆ ಮೂಲಕ ಮನವಿ ನೀಡಲಾಯಿತು.
ಸೋಮವಾರ ಅಂಚೆ ಕಚೇರಿ ಮುಂಭಾಗ ಭಾರತೀಯ ಕಿಸಾನ್(ರೈತ) ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೊಂದ ನಿವೇಶನ ರಹಿತ ಕೂಲಿಕಾರರು ಸುದ್ದಿಗೋಷ್ಠಿ ನಡೆಸಿದರು.
ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಸ್ವಾಧೀನದಲ್ಲಿರುವ ಎರಡು ಎಕರೆ 20 ಗುಂಟೆ ಜಮೀನಿದೆ. 70 ವರ್ಷಗಳಿಂದ ದಲಿತ ಕುಟುಂಬಗಳು ವಸತಿ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಕಿಸಾನ್ ಪಕ್ಷದ ಅಧ್ಯಕ್ಷ ಬೋಜರಾಜು ಮಾತನಾಡಿ, ಶೆಟ್ಟಿಕೆರೆ ಗ್ರಾಮದಲ್ಲಿ ಕೂಲಿ ಕಾರ್ಮಿಕರು, ನಿರ್ಗತಿಕರು ಹಾಗೂ ದಲಿತರು ವಾಸವಿದ್ದಾರೆ.,ವಾಸವಿರುವ 20 ಮನೆಗೆ ಹಕ್ಕುಪತ್ರ ನೀಡದೆ ಬಲಾಢ್ಯರಿಗೆ ಹಕ್ಕುಪತ್ರ ನೀಡಿದ್ದಾರೆ. ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಆದರೆ ಹಕ್ಕುಪತ್ರ ನೀಡಿಲ್ಲ ಎಂದರು.
ಅಲ್ಲಿನ ನಿರ್ಗತಿಕರಿಗೆ ಶೀಘ್ರವೇ ಹಕ್ಕುಪತ್ರ ನೀಡಬೇಕು. ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಪ್ಪ ಮಾತನಾಡಿ, ಪ್ರಾಂತ ರೈತ ಸಂಘ ಬಗರ್ ಹುಕುಂ, ಅರಣ್ಯ, ಗೋಮಾಳ ಹಾಗೂ ಭೂ ಸಂಬಂಧಪಟ್ಟಂತೆ ಅನೇಕ ಹೋರಾಟ ಮಾಡಿ ರೈತರಿಗೆ ನ್ಯಾಯ ದೊರಕಿಸಿಕೊಟ್ಟಿದೆ. ತಾಲ್ಲೂಕಿನಲ್ಲಿ ಅನೇಕ ನಿರ್ಗತಿಕರು ನಿವೇಶನ, ಹಕ್ಕುಪತ್ರ ಸಿಗದೇ ವಂಚಿತರಾಗಿದ್ದಾರೆ. ನಿವೇಶನ ರಹಿತ ನೊಂದ ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.