ಮಧುಗಿರಿ: ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಕೆರೆ, ಕಟ್ಟೆ, ಹಳ್ಳ ಹಾಗೂ ಚೆಕ್ಡ್ಯಾಂಗಳು ತುಂಬಿ ಹರಿಯುತ್ತಿದ್ದು, ರೈತರು ಸಂತಸಗೊಂಡಿದ್ದಾರೆ.
ತಾಲ್ಲೂಕಿನಲ್ಲಿ ಈ ಹಿಂದೆ ಮಳೆ ಕೊರತೆಯಿಂದ ಕೆರೆ, ಕಟ್ಟೆ ಹಾಗೂ ಕೊಳವೆಬಾವಿಗಳಲ್ಲಿ ನೀರು ಬರಿದಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದ ಕೆರೆಯಲ್ಲಿ ನೀರು ಶೇಖರಣೆಯಾಗಿದ್ದು, ಅಂತರ್ಜಲ ಮಟ್ಟ ವೃದ್ಧಿಸಿದೆ. ಕೊಳವೆ ಬಾವಿಗಳಲ್ಲಿ ನೀರು ಬಂದಿರುವುದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ.
ತಾಲ್ಲೂಕಿನ ಹಳ್ಳ ಹಾಗೂ ಕಟ್ಟೆಗಳಲ್ಲಿ ಮಳೆಯ ನೀರು ತುಂಬಿ ಕೆಲ ಕೆರೆಗಳು ಕೋಡಿ ಬಿದ್ದಿವೆ. ಮಧುಗಿರಿ ಚೋಳೇನಹಳ್ಳಿ ಕೆರೆ ಹಾಗೂ ಸಿದ್ದಾಪುರ ಕೆರೆ ಭರ್ತಿಯಾಗಿದ್ದು, ಶುಕ್ರವಾರ ಕೋಡಿ ಬಿದ್ದಿದೆ. ಕೆರೆಯ ನೀರನ್ನು ನೋಡಲು ಜನರು ಜಡಿ ಮಳೆಯನ್ನೂ ಲೆಕ್ಕಿಸಿದೆ ತಂಡೋಪತಂಡವಾಗಿ ಭೇಟಿ ನೀಡಿದ್ದರು. ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಲ್ಲೂ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರಳಿ ಪಾಠ ಕೇಳಿದರು. ಜನರು ಬಿಸಿಯಾದ ಕಾಫಿ, ಬೊಂಡ, ಬಜ್ಜಿ, ಜೋಳ ಸೇರಿದಂತೆ ಇತರೇ ಆಹಾರ ಪದಾರ್ಥಗಳ ಸೇವನೆಗೆ ಮೊರೆ ಹೋದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.