ತುಮಕೂರು: ಹೊನ್ನುಡಿಕೆ ಹ್ಯಾಂಡ್ಪೋಸ್ಟ್ ಬಳಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಧನುಷ್ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಕ್ಕೆ ಶಾಲೆಯ ಮುಖ್ಯ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ವಿದ್ಯಾರ್ಥಿ ಪೋಷಕರು ಹಾಗೂ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಯಕರ್ತರು ಆರೋಪಿಸಿ ಶಾಲೆಯ ಎದುರು ಪ್ರತಿಭಟಿಸಿದರು.
ಧನುಷ್ ಶನಿವಾರ ಶಾಲೆ ಮುಗಿಸಿಕೊಂಡು ಸೈಕಲ್ನಲ್ಲಿ ರಸ್ತೆ ದಾಟುವ ವೇಳೆ ತುಮಕೂರು ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಈ ಜಾಗದಲ್ಲಿ ನಡೆಯುತ್ತಿರುವ ಮೂರನೇ ಅಪಘಾತ ಇದು. ಪದೇ ಪದೇ ಅಪಘಾತ ಆದರೂ ಮುಖ್ಯಶಿಕ್ಷಕರು ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು.
ಶಾಲೆ ತುಮಕೂರು–ಕುಣಿಗಲ್ ರಸ್ತೆಗೆ ಹೊಂದಿಕೊಂಡಂತೆ ಇದೆ. ಶಾಲೆಯ ಹಿಂದೆ, ಮುಂದೆ ರಸ್ತೆಗೆ ಹುಬ್ಬು (ಹಂಪ್ಸ್) ಹಾಕದ ಕಾರಣ ವಾಹನಗಳು ವೇಗವಾಗಿ ಸಾಗುತ್ತವೆ ಎಂದು ದೂರಿದರು.
ಶಾಲೆ ಬಳಿ ನಿಧಾನವಾಗಿ ಚಲಿಸಿ ಎಂಬ ನಾಮಫಲಕವೂ ಇಲ್ಲ. ಯಾವುದೇ ಎಚ್ಚರಿಕೆಯ ಸೂಚನೆ ಇಲ್ಲದ ಕಾರಣ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಮುಖ್ಯ ಶಿಕ್ಷಕರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಮಿತಿ ಕಾರ್ಯದರ್ಶಿ ಜಿ.ಆರ್.ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದ ಡಿಡಿಪಿಐ ಮತ್ತು ಬಿಇಒ ಅವರು ‘ತುಳಸಿ ಮದ್ದಿನೇನಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ಹಂಪ್ಸ್ ನಿರ್ಮಿಸುವಂತೆ ಮನವಿ ಮಾಡಿದ್ದೇವೆ. ಆದರೆ ಹಂಪ್ಸ್ ನಿರ್ಮಾಣವಾಗಿಲ್ಲ. ಮತ್ತೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.